ಈ ಘಟನೆ ನಡೆದದ್ದು 1990ರ ಜನವರಿಯಲ್ಲಿ. ಆಗ ದೇಶದ ಪ್ರಧಾನಿ ವಿ.ಪಿ.ಸಿಂಗ್, ಸಮ್ಮಿಶ್ರ ಸರ್ಕಾರದ ಆಡಳಿತ. ಈ ಸರ್ಕಾರಕ್ಕೆ ಬಿಜೆಪಿ ಹಾಗೂ ಎಡಪಕ್ಷಗಳು ಬಾಹ್ಯ ಬೆಂಬಲ ನೀಡಿದ್ದವು. ಜಮ್ಮು ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ ರಾಜೀನಾಮೆ ನೀಡಿದ್ದರು. ಜಗನ್ಮೋಹನ್ ಅವರು ರಾಜ್ಯಪಾಲರಾಗಿದ್ದರು. ಮುಫ್ತಿ ಮೊಹಮ್ಮದ್ ಅವರು ಗೃಹಮಂತ್ರಿ. ಆದರೆ ಈ ಘಟನೆ ಏಕಾಏಕಿ ನಡೆಯಲು ಸಾಧ್ಯವೇ? ಇಂತಹ ದೊಡ್ಡ ಮಟ್ಟದ ಘಟನೆಗೆ ಪೂರ್ವಸಿದ್ಧತೆ ನಡೆಯುತ್ತಿದ್ದಾಗ ಪ್ರಧಾನಿಯಾಗಿದ್ದವರು ರಾಜೀವ್ ಗಾಂಧಿ. ಫಾರೂಕ್ ಅಬ್ದುಲ್ಲಾ ಅವರು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ. ಈ ಹಿನ್ನೆಲೆಯಲ್ಲಿ ನೋಡಿದಾಗ, ಈ ಮಾರಣಹೋಮದ ಹೊಣೆಗಾರಿಕೆಯನ್ನು ಎಲ್ಲ ರಾಜಕೀಯ ಪಕ್ಷಗಳೂ ವಹಿಸಬೇಕು. ಬೈಬಲ್ನಲ್ಲಿ, ವೇಶ್ಯೆಯೊಬ್ಬಳನ್ನು ಕಲ್ಲುಗಳಿಂದಹೊಡೆಯಲು ಬಂದ ಜನರಿಗೆ ‘ನಿಮ್ಮಲ್ಲಿ ಒಂದೂ ಪಾಪ ಮಾಡದವರು ಕಲ್ಲು ಕೈಗೆತ್ತಿಕೊಳ್ಳಿ’ ಎಂದು ಏಸು ಹೇಳಿದಾಗ, ಅಲ್ಲಿ ಸೇರಿದ್ದ ಎಲ್ಲ ಜನರ ಕೈಗಳಿಂದ ಕಲ್ಲುಗಳು ಕೆಳಗೆ ಬೀಳುತ್ತವೆ.