ಚುನಾವಣೆಯನ್ನು ಮಹಾಯುದ್ಧ ಎಂಬಂತೆ ಕೆಲವು ಟಿ.ವಿ. ವಾಹಿನಿಗಳು ಬಿಂಬಿಸುತ್ತಿವೆ. ಇದು ತಪ್ಪು. ಚುನಾವಣೆ ಸ್ಪರ್ಧಾತ್ಮಕವಾಗಿ ಇರಬೇಕೇ ವಿನಾ ದ್ವೇಷ- ಯುದ್ಧದ ರೀತಿ ಇರಬಾರದು. ದೇಶ ಮುಖ್ಯ, ಪ್ರತೀ ಪ್ರಜೆಯ ಅಭಿವೃದ್ಧಿ ಮುಖ್ಯ.
ಹೀಗಾಗಿ, ನಮ್ಮ ಭವಿಷ್ಯ ನಮ್ಮ ತುದಿ ಬೆರಳಿನಲ್ಲಿದೆ ಎಂದು ಅರಿತು ಮತದಾನ ಮಾಡಬೇಕು. ಯಾವುದೇ ಕ್ಷಣಿಕ ಆಮಿಷಕ್ಕೆ ಬಲಿಯಾಗಿ, ಪೂರ್ವಗ್ರಹ ಪೀಡಿತರಾಗಿ ಮತದಾನ ಮಾಡಬಾರದು.
ಹಾಗೆಯೇ ಆ ಪಕ್ಷ ಈ ಪಕ್ಷ ಎಂದು ವೈಯಕ್ತಿಕವಾಗಿ ದ್ವೇಷ ಭಾವನೆ ಬೆಳೆಸಿಕೊಂಡರೆ ಪ್ರಯೋಜನವಿಲ್ಲ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಿಲ್ಲ, ಮಿತ್ರರೂ ಇಲ್ಲ. ಚುನಾವಣೆ ನಂತರ ಯಾರೆಲ್ಲ ಒಂದಾಗುತ್ತಾರೆ ಎಂದು ಹೇಳಲಾಗದು. ಆದರೆ ಕಾರ್ಯಕರ್ತರು ಮಾತ್ರ ಹೊಡೆದಾಡಿಕೊಂಡು ಶತ್ರುಗಳಾಗಿಯೇ ಉಳಿದುಬಿಡುತ್ತಾರೆ.
ಅದಕ್ಕೆ ಅವಕಾಶ ಕೊಡದೆ, ಚುನಾವಣೆಯನ್ನು ಹಬ್ಬದಂತೆ ಅಥವಾ ಕ್ರೀಡೆಯ ರೀತಿ ಸ್ಪರ್ಧಾತ್ಮಕವಾಗಿ ಸ್ವೀಕರಿಸಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕು. -ಆರ್.ಚಂದ್ರಕುಮಾರ್, ಬೆಂಗಳೂರು