2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಕೆಪಿಎಸ್ಸಿ ಮೂಲಕ ಅಕ್ರಮ ಮಾರ್ಗದಿಂದ ಆಯ್ಕೆಯಾಗಿರುವುದು ಸಾಬೀತಾಗಿರುವುದರಿಂದ, 362 ಅಭ್ಯರ್ಥಿಗಳು ನೇಮಕಾತಿಗೆ ಅರ್ಹರಲ್ಲವೆಂದು ಹೇಳಿರುವ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್, ಇವರ ಆಯ್ಕೆ ಪ್ರಕ್ರಿಯೆ ರದ್ದು ಮಾಡಿದ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿವೆ. ಹೀಗಿರುವಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಈ ಅಭ್ಯರ್ಥಿಗಳ ಪರವಾಗಿ ಬ್ಯಾಟ್ ಬೀಸಿರುವುದನ್ನು (ಪ್ರ.ವಾ., ಜ. 18) ನೋಡಿದರೆ ಸೋಜಿಗವೆನಿಸುತ್ತದೆ. ನ್ಯಾಯಾಲಯಗಳ ಆದೇಶಕ್ಕೆ ವಿರುದ್ಧವಾಗಿ ಮುಖ್ಯಮಂತ್ರಿಗೆ ಈ ಕುರಿತು ಪತ್ರ ಬರೆಯುವುದು ಗೌರವಯುತ ಸ್ಥಾನದಲ್ಲಿರುವವರ ಘನತೆಗೆ ತಕ್ಕುದಲ್ಲ. ಆ ಪತ್ರ ಆಧರಿಸಿ ಕ್ರಮ ತೆಗೆದುಕೊಳ್ಳಲು ಕಡತ ಮಂಡಿಸುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸುವುದು ನ್ಯಾಯಾಂಗದ ತೀರ್ಪಿಗೆ ಅಗೌರವ ತೋರಿಸಿದಂತೆ.