ಮಳೆ ಈ ಸಲ ಮತ್ತೆ ರೈತರ ಬದುಕಿನ ಜೊತೆ ‘ಜೂಜಾಟ’ ಆಡಿದೆ. ಹೊಲ–ಗದ್ದೆಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಎಲ್ಲವನ್ನೂ ಮಳೆ ನುಂಗಿಹಾಕಿದೆ. ನಮ್ಮ ಪ್ರದೇಶವು ತೊಗರಿಯ ಕಣಜ ಎಂದೇ ಹೆಸರುವಾಸಿ. ಕಲಬುರಗಿಯಲ್ಲಿ ಕಳೆದ ತಿಂಗಳು, ಎಂಟು ದಿನ ಎಡೆಬಿಡದೆ ಮಳೆ ಸುರಿದಿತ್ತು. ಬಿಸಿಲಿಗಾಗಿ ರೈತರು ಮುಗಿಲಿನತ್ತ ಮುಖ ಮಾಡಿದ್ದರು. ಬಿಸಿಲು ಕಾಣಿಸಿಕೊಂಡಾಗ ಮುಖ ಅರಳಿತು. ಈಗ ಪುನಃ ಮಳೆ ಅಪ್ಪಳಿಸಿದೆ. ತೊಗರಿಬೆಳೆಗೆ ಚರಮಗೀತೆ ಹಾಡಿದೆ. ರೈತರ ಮುಖ ಬಾಡಿದೆ. ಆತ್ಮಸ್ಥೈರ್ಯ ಕುಗ್ಗಿದೆ.