ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಕುರಿತು ಎಸ್.ಬಿ.ಸುಧಾಕರ್ ಬರೆದಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಕಲಾಗ್ರಾಮದ ಆವರಣದಲ್ಲಿ ಗುರುವಾರ ನಿಗದಿಯಾಗಿತ್ತಷ್ಟೆ. ಆದರೆ, ಹಿಂದೂ ಜನಜಾಗೃತಿ ಸಮಿತಿಯವರೆಂದು ಹೇಳಿಕೊಂಡ ಕೆಲವರು ತಕರಾರು ತೆಗೆದು, ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟು, ಕೊನೆಗೆ ಕಲಾಗ್ರಾಮದಲ್ಲಿ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಿದ್ದರಿಂದ ಲೇಖಕರು ತಮ್ಮ ಮನೆಯಲ್ಲೇ ಪುಸ್ತಕ ಬಿಡುಗಡೆ ಮಾಡಿದ ಸುದ್ದಿ (ಪ್ರ.ವಾ., ಅ. 28) ಓದಿ ವಿಷಾದವಾಯಿತು. ಜೊತೆಗೆ, ಪ್ರತಿಭಟನೆ ಮಾಡಿದವರ ಬಗ್ಗೆ ಹೇವರಿಕೆಯೂ ಹುಟ್ಟಿತು. ಏಕೆಂದರೆ, ಹೀಗೆ ಗಲಾಟೆ ಮಾಡಿದವರ್ಯಾರೂ ಈ ಪುಸ್ತಕವನ್ನು ಓದಿದವರಲ್ಲ. ಕೇವಲ ‘ಇಮ್ರಾನ್ ಖಾನ್’ ಎನ್ನುವ ಶೀರ್ಷಿಕೆಯನ್ನು ನೋಡಿಯೇ ಇವರೆಲ್ಲ ಹೀಗೆ ಕುಪಿತರಾಗಿ ವರ್ತಿಸಿರುವುದು ಯಾರಿಗೇ ಆದರೂ ಗೊತ್ತಾಗುತ್ತದೆ. ಸಂಘಟನೆಗಳು ತಮ್ಮ ಕಾರ್ಯಕರ್ತರಿಗೆ ಸರಿಯಾದ ಬೌದ್ಧಿಕ ತರಬೇತಿ ಕೊಡದೆ ಇರುವುದರ ದುಷ್ಪರಿಣಾಮವಿದು. ಜೊತೆಗೆ, ಎಲ್ಲ ಸಂಘಟನೆಗಳೂ ತಮ್ಮೊಳಗೊಂದು ‘ಪೊಲಿಟಿಕಲ್ ಅಜೆಂಡಾ’ವನ್ನು ಸಲಹುತ್ತಿರುವ ಪ್ರವೃತ್ತಿಯನ್ನು ಇದು ತೋರಿಸುತ್ತದೆ.