ಭತ್ತದ ಕೃಷಿ ಅವನತಿಯತ್ತ ಸಾಗಿರುವುದರ ಬಗೆಗಿನ ವಸ್ತುಸ್ಥಿತಿಯನ್ನು ಸತೀಶ್ ಜಿ.ಕೆ. ತೀರ್ಥಹಳ್ಳಿ ತೆರೆದಿಟ್ಟಿದ್ದಾರೆ (ಸಂಗತ, ಆ. 14). ಹಿಂದೆ ಮಲೆನಾಡಿನಲ್ಲಿ ಭತ್ತ ಬೆಳೆಯುವುದು ಒಂದು ಆದರಣೀಯ ಉದ್ಯೋಗವಾಗಿತ್ತು. ಒಬ್ಬ ರೈತ ಜಾಸ್ತಿ ಭತ್ತ ಬೆಳೆಯುತ್ತಿದ್ದಾನೆಂದರೆ ಆತನಿಗೆ ತುಂಬಾ ಗೌರವ, ಮಾನ್ಯತೆ ಲಭಿಸುತ್ತಿದ್ದವು. ಆ ಊರಿಗೇ ಆತ ಒಬ್ಬ ದೊಡ್ಡ ಜನ ಅಂತ ಭಾವಿಸಲಾಗುತ್ತಿತ್ತು. ಒಬ್ಬ ವರನಿಗೆ ಹೆಣ್ಣು ಕೊಡಲು ಬರುವ ಕನ್ಯಾಪಿತೃಗಳು ಆ ಮನೆಯ ಕಣದಲ್ಲಿ ದೊಡ್ಡ ಭತ್ತದ ಕುತ್ತರೆ ಅಥವಾ ಹುಲ್ಲಿನ ಗೊಣವೆಗಳನ್ನು ನೋಡಿದರೆ, ಆ ವರನನ್ನು ಅಳಿಯನನ್ನಾಗಿ ಸ್ವೀಕರಿಸಲು ಆ ಒಂದು ಮಾನದಂಡವೇ ಸಾಕಾಗಿ ಬಿಡುತ್ತಿತ್ತು.