ಇನ್ನು ವಿಜಯಪುರಕ್ಕೆ ಬಸವಣ್ಣನವರ ಸಮಕಾಲೀನ ಶರಣರಾದ ಸಿದ್ಧರಾಮೇಶ್ವರರ ಹೆಸರಿಡುವುದು ಔಚಿತ್ಯಪೂರ್ಣ. ಏಕೆಂದರೆ ವಿಜಯಪುರವು ಸಿದ್ಧರಾಮರ ಕಾರ್ಯಕ್ಷೇತ್ರ. ಅವರ ನೆಲೆವೀಡಾದ ಸೋಲಾಪುರ ಅದರ ಸಮೀಪವೇ ಇದೆ. ಅಲ್ಲದೆ ಅಲ್ಲಿನ ಸಿದ್ಧೇಶ್ವರ ದೇವಾಲಯ ಪ್ರಸಿದ್ಧವಾಗಿದೆ. ಇದರಿಂದ ಹೊರ ರಾಜ್ಯದ ಮತ್ತೊಬ್ಬ ಮಹಾನ್ ಶಿವಶರಣನಿಗೊಂದು ಗೌರವ ಸ್ಮಾರಕ ಮಾಡಿದ ಶ್ರೇಯಸ್ಸು ಕರ್ನಾಟಕ ಸರ್ಕಾರಕ್ಕೆ ಲಭಿಸಿದಂತಾಗುವುದು. 12ನೇ ಶತಮಾನದ ಕಾಯಕಯೋಗಿ, ಧರ್ಮಗುರು, ಪ್ರಮುಖ ವಚನಕಾರರೊಬ್ಬರನ್ನು ಗೌರವಿಸಿದಂತಾಗುತ್ತದೆ. ಇಷ್ಟಕ್ಕೂ ಸಿದ್ಧರಾಮೇಶ್ವರರು ಲಿಂಗಾಯತರ ಮನೆದೇವತೆ ಮಾತ್ರವೇ ಅಲ್ಲದೆ ಅಸಂಖ್ಯ ಕುರುಬರು, ಒಕ್ಕಲಿಗರು ಮತ್ತು ಇತರ ಹಿಂದುಳಿದ ವರ್ಗಗಳ ಮನೆದೈವವೂ ಹೌದು.