ದೆಹಲಿಯಲ್ಲಿ ನಲವತ್ತು ಅಗತ್ಯ ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೇ ತಲುಪಿಸುವ ‘ಹೋಮ್ ಡೆಲಿವರಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಆಡಳಿತಾತ್ಮಕವಾಗಿ ಇದೊಂದು ಕ್ರಾಂತಿಕಾರಕ ನಡೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಯೋಜನೆ ವ್ಯವಸ್ಥಿತವಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದೇ ಆದಲ್ಲಿ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅನಗತ್ಯ ಅಲೆದಾಟ ತಪ್ಪಿದಂತಾಗುತ್ತದೆ. ಈ ಮೂಲಕ ಸಾರ್ವಜನಿಕರ ಅಮೂಲ್ಯವಾದ ಸಮಯ ಉಳಿತಾಯವಾಗಿ, ಅದು ಇನ್ನಿತರ ಉತ್ಪಾದಕ ಕಾರ್ಯಗಳಿಗೆ ಬಳಕೆಯಾದಂತಾಗುತ್ತದೆ. ನಮ್ಮ ರಾಜ್ಯದಲ್ಲೂ ಈ ಮಾದರಿಯ ಕಾರ್ಯಕ್ರಮ ಅನುಷ್ಠಾನವಾಗಬೇಕಿದೆ.