ಈ ಪ್ರಸಂಗದಲ್ಲಿ ನನಗೆ ಡಾ. ರಾಮಮನೋಹರ ಲೋಹಿಯಾ ನೆನಪಾಗುತ್ತಾರೆ. ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಲೋಹಿಯಾ, ಅನಾರೋಗ್ಯಪೀಡಿತರಾಗಿ ನವದೆಹಲಿಯ ಆಸ್ಪತ್ರೆಗೆ ದಾಖಲಾಗಿರುತ್ತಾರೆ (ಈಗದು ರಾಮ ಮನೋಹರ ಲೋಹಿಯಾ ಆಸ್ಪತ್ರೆ ಎಂದು ಪುನರ್ ನಾಮಕರಣಗೊಂಡಿದೆ). ಲೋಹಿಯಾ ಅವರ ಆರೋಗ್ಯಸ್ಥಿತಿ ಉಲ್ಬಣಿಸುತ್ತದೆ. ವಿದೇಶದಿಂದ ತಜ್ಞ ವೈದ್ಯರನ್ನು ಕರೆಸಿ, ಚಿಕಿತ್ಸೆ ಮುಂದುವರಿಸುವ ಕುರಿತು ವೈದ್ಯರ ತಂಡ ಚರ್ಚಿಸುತ್ತಿರುತ್ತದೆ. ಅದನ್ನು ಕೇಳಿಸಿಕೊಂಡ ಲೋಹಿಯಾ ಅವರು ಆ ವೈದ್ಯರಿಗೆ ಕೇಳುತ್ತಾರೆ, ‘ಈಗ ನನಗೆ ಸಿಗಲಿರುವ ವಿದೇಶಿ ವೈದ್ಯರ ಸೇವೆಯ ಸೌಲಭ್ಯ ಭಾರತದ ಸರ್ವ ಜನಸಾಮಾನ್ಯರಿಗೂ ಸಿಗುತ್ತದೇನು?’ ‘ಇಲ್ಲ’ ಎಂಬ ಉತ್ತರ ವೈದ್ಯರಿಂದ ಬಂದಾಗ, ಲೋಹಿಯಾ ಸ್ಪಷ್ಟವಾಗಿ ಹೇಳುತ್ತಾರೆ, ‘ಬಡವರಿಗೆ ಸಿಗದ ಇಂಥ ಯಾವ ಸೌಲಭ್ಯ ನನಗೆ ಯಾಕೆ ಬೇಕು? ಬೇಡ... ಬೇಡವೇ ಬೇಡ’ ಎಂದು ನಿರಾಕರಿಸುತ್ತಾರೆ.