ಎಲ್ಲ ಜಾತಿಯವರೂ ತಮಗೆ ಮೀಸಲಾತಿ ಬೇಕು, ತಮಗಾಗಿ ಪ್ರತ್ಯೇಕ ನಿಗಮ– ಪ್ರಾಧಿಕಾರ ರಚಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಹೋರಾಟಕ್ಕಿಳಿದರೆ, ಇಂತಹ ಹೋರಾಟಗಳಿಗೆ ಕೊನೆಯುಂಟೇ? ಅದರ ಬದಲು ರೈತರಿಗೆ ನೀರಾವರಿ ಸೌಕರ್ಯ, ಅವರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ, ಮಾರುಕಟ್ಟೆ ದೊರೆಯುವಂತೆ ಮಾಡಲು, ಯುವಜನರಿಗೆ ಉತ್ತಮ ವಿದ್ಯಾಭ್ಯಾಸ, ಉದ್ಯೋಗಾವಕಾಶ, ಸ್ವಉದ್ಯೋಗ ತರಬೇತಿ, ಸಾರ್ವಜನಿಕ ಆರೋಗ್ಯದ ಗುಣಮಟ್ಟ ಹೆಚ್ಚಳ, ನಾಡಿಗೆ ಉತ್ತಮ ಮೂಲಸೌಕರ್ಯ ದೊರೆಯುವಂತೆ ಮಾಡಲು ಎಲ್ಲಾ ಸಮಾಜದ ಸ್ವಾಮೀಜಿಗಳು, ಚಿಂತಕರು ಹೋರಾಟ ಮಾಡಬೇಕು. ಆಗ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಅಲ್ಲದೆ ಅದು ದೂರದೃಷ್ಟಿಯ ಚಿಂತನೆಯ ಫಲವಾಗಿ ಮುಂದಿನ ಪೀಳಿಗೆಗೆ ದಾರಿದೀವಿಗೆಯಾಗುತ್ತದೆ.