‘ಧಾರ್ಮಿಕ ಕಟ್ಟುಪಾಡುಗಳ ಬಿಗಿಹಿಡಿತ’ ಎಂಬ ಡಾ. ಶಿವಮೂರ್ತಿ ಮುರುಘಾ ಶರಣರ ಲೇಖನವನ್ನು (ಪ್ರ.ವಾ., ಜುಲೈ 6) ಓದಿದಾಗ ಈ ಪತ್ರ ಬರೆಯಬೇಕೆನಿಸಿತು. ನಿಜ ಹೇಳಬೇಕೆಂದರೆ, ಈ ಜಾತಿವಾದ, ಪರಸ್ಪರ ವೈಷಮ್ಯ ಹೆಚ್ಚಾಗಿರುವುದಕ್ಕೆ ಕಾರಣ ರಾಜಕಾರಣಿಗಳು ಮತ್ತು ಮಠಾಧೀಶರು. ಮುಖ್ಯವಾಗಿ, ಬಸವಣ್ಣನವರ ಅನುಯಾಯಿಗಳೆಂದು ಹೇಳಿಕೊಳ್ಳುವ ಕೆಲವು ಕಾವಿಧಾರಿಗಳು, ತಮ್ಮ ಕರ್ತವ್ಯ ಮರೆತು ರಾಜಕೀಯ ಮಾಡುತ್ತಿರುವುದು ವಿಷಾದನೀಯ. ಬಸವಣ್ಣನವರು ಯಾವುದನ್ನು ಬೇಡವೆಂದು ಧಿಕ್ಕರಿಸಿದ್ದರೋ ಅದನ್ನು ಇವರು ಬಿಡದೆ ಮಾಡುತ್ತಿದ್ದಾರೆ. ನೂರಾರು ಮಠಗಳನ್ನು ಸ್ಥಾಪಿಸಿ, ಅವರವರಲ್ಲೇ ವೈಷಮ್ಯ ಹುಟ್ಟಿಸಿದ್ದಾರೆ. ತಮ್ಮ ಗುಂಪಿನ ಜನಕ್ಕೇ ಪದವಿ ಬೇಕೆಂದು ಧರಣಿ ಮಾಡುವ ಹೀನ ಸ್ಥಿತಿಗೆ ಇಳಿದಿದ್ದಾರೆ.