ರೈತರ ಮಕ್ಕಳು ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಸಹಜವಾಗಿಯೇ ಪ್ರಾಯೋಗಿಕ ಜ್ಞಾನ ಹೊಂದಿರು ತ್ತಾರೆ. ಮುಖ್ಯ ಪರೀಕ್ಷೆಗಳಲ್ಲಿ ನಗರದ ವಿದ್ಯಾರ್ಥಿಗಳಿಗೆ ಸಮ ನಾಗಲಾರರು ಎಂಬ ಕಾರಣದಿಂದ, ಬಿಎಸ್ಸಿ (ಅಗ್ರಿಕಲ್ಚರ್, ಹಾರ್ಟಿಕಲ್ಚರ್), ಪಶು ಸಂಗೋಪನಾ ವಿಷಯಗಳಿಗೆ ಸೇರ ಬಯಸುವ ರೈತ ಕುಟುಂಬದ ವಿದ್ಯಾರ್ಥಿಗಳಿಗೆ ಸುಮಾರು ಮೂರು ಸಾವಿರ ಸೀಟುಗಳನ್ನು ಮೀಸಲಿಟ್ಟು, ಪ್ರತ್ಯೇಕವಾಗಿ ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಸಿಇಟಿ, ಪಿಯು ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಕ್ರೋಡೀಕರಿಸಿಕೊಂಡು ಮೆರಿಟ್ ಆಧಾರದ ಮೇಲೆ ಸೀಟನ್ನು ಹಂಚಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ಕಾರಣದಿಂದ ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಈ ಪರೀಕ್ಷೆಯಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿ ಸೀಟು ಗಿಟ್ಟಿಸಿಕೊಳ್ಳುತ್ತಿದ್ದ ರೈತ ಕುಟುಂಬಗಳ ವಿದ್ಯಾರ್ಥಿಗಳು, ತಮಗಾಗಿ ಮೀಸಲಿಟ್ಟ ಸೀಟುಗಳು ಎಲ್ಲಿ ನಗರ ವಿದ್ಯಾರ್ಥಿಗಳ ಪಾಲಾಗುತ್ತವೋ ಎಂಬ ಆತಂಕದಲ್ಲಿದ್ದಾರೆ.