‘ಜೀವನೋಪಾಯಕ್ಕಾಗಿ ಒಂದು ಅಂಗನವಾಡಿಯಲ್ಲಿ ಆಯಾ ಕೆಲಸ ನೀಡಿ, ಆ ಕೆಲಸ ಸಿಕ್ಕದೇ ಹೋದರೆ ನನ್ನೆರಡು ಮಕ್ಕಳನ್ನು ಸಾಕುವುದು ಕಷ್ಟ. ಇಲ್ಲದೇ ಹೋದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯಿದೆ’ ಎಂದು ಮಹಿಳೆಯೊಬ್ಬರು ಜನಸ್ಪಂದನ ಸಭೆಯಲ್ಲಿ ಮನವಿ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ದಾವಣಗೆರೆ ಜಿಲ್ಲಾಧಿಕಾರಿಯು ಸಭೆಯಲ್ಲಿ ಹಾಜರಿದ್ದ ಮಹಿಳೆಯನ್ನು ಪೊಲೀಸರ ವಶಕ್ಕೆ ನೀಡಿ, ಠಾಣೆಯಲ್ಲಿ ಕೂರಿಸಿ ಪ್ರಕರಣ ದಾಖಲಿಸಲು ಆದೇಶಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕನಿಷ್ಠಮಟ್ಟದ ಜೀವನ ನಡೆಸಲೂ ಆಗದೆ ಹತಾಶೆಯಿಂದ ಹೇಳಿದ ಮಾತಿಗೆ ಜಿಲ್ಲಾಧಿಕಾರಿ ಸ್ಪಂದಿಸಿದ ರೀತಿ ಅಮಾನವೀಯವಾಗಿದೆ.