ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ದಾರಿದೀಪವಾಗಿರುವ ಇಂಗ್ಲೆಂಡಿನ ಎರಡೂ ಸದನಗಳ ಚರ್ಚೆಗಳು ಎಲ್ಲರಿಗೂ ಮಾದರಿ. ಅಲ್ಲಿನ ಚರ್ಚೆಗಳು, ಪ್ರಬುದ್ಧರ ವಿಷಯ ಮಂಡನೆಗಳು ಒಂದು ದಿಕ್ಸೂಚಿ. ಇಲ್ಲಿ, ಸಂಸತ್ತಿನಲ್ಲಿನ ಚರ್ಚೆಗಳಿಗೆ ವಿ.ಕೆ.ಕೃಷ್ಣ ಮೆನನ್, ಆಚಾರ್ಯ ಕೃಪಲಾನಿ, ಎನ್.ಜಿ.ರಂಗಾ, ಮೀನೂ ಮಸಾನಿ, ಲೋಹಿಯಾ, ಹೇಮ್ ಬರುವಾ, ಹಿರೇನ್ ಮುಖರ್ಜಿ, ವಾಜಪೇಯಿ ಅಂತಹವರುಗಳ ಕೊಡುಗೆ ಅಪಾರ. ಇದಕ್ಕೆ ಕಾರಣ, ಅವರು ಮಾತನಾಡುವುದಕ್ಕೆ ಸಿಕ್ಕ ಅವಕಾಶ. ಜೊತೆಗೆ, ಚರ್ಚೆಗಳೂ ಬರಲಿರುವ ಪೀಳಿಗೆಗೆ ಆದರ್ಶ. ಸಂಸತ್ತು ಮತ್ತು ವಿಧಾನಮಂಡಲಗಳು ಅನೇಕರ ವಿದ್ವತ್ತು ಪ್ರಕಾಶಿಸುವುದರ ದ್ಯೋತಕ. ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಮೆರುಗು ಕೊಡುವುದೇ ಶಾಸನಸಭೆಗಳ ಮುಕ್ತ, ಪ್ರಬುದ್ಧ ಚರ್ಚೆಗಳು. ಇವುಗಳಿಗೆ ಅವಕಾಶ ಇರದಿದ್ದರೆ ಸಂಸತ್ತಿನ ಕಲಾಪಗಳು ಬರಡು. ಇದನ್ನು ಸಂಸತ್ತಿನ ಹಿರಿಯರೇ ಗ್ರಹಿಸದಿರುವುದು ವಿಷಾದಕರ.