ವಾಲ್ಮೀಕಿ ಪೂರ್ವಾಶ್ರಮಕ್ಕೆ ಸಂಬಂಧಿಸಿದಂತೆ ಅರುಣ್ ಜೋಳದಕೂಡ್ಲಿಗಿ ಅವರು ಬರೆದಿದ್ದಾರೆ (ಸಂಗತ, ಅ. 18). ರಾಮಾಯಣದ ಕವಿಯ ವಿಚಾರ ಬಂದಾಗಲೆಲ್ಲ ಒಂದು ಸಂಗತಿಯ ಪ್ರಸ್ತಾಪ ಬಂದೇ ಬರುತ್ತದೆ. ಅದೆಂದರೆ ದರೋಡೆಕೋರನಾಗಿದ್ದವನು ವರ್ಷಗಟ್ಟಲೆ ಸುದೀರ್ಘ ತಪಸ್ಸನ್ನು ಆಚರಿಸಿ ಕೂತಲ್ಲಿಯೇ ತನ್ನ ದೇಹದ ಸುತ್ತ ಬೆಳೆದಿದ್ದ ಹುತ್ತವನ್ನು ಒಡೆದು ಹೊರಬಂದನಾದ ಕಾರಣ ವಾಲ್ಮೀಕಿ ಎಂದು ಹೆಸರಾದ ಎಂಬುದು. ಅವನು ದರೋಡೆ ಕೋರನಾಗಿದ್ದನೋ ಇಲ್ಲವೋ ಅದು ಬೇರೆ ವಿಷಯ. ಸಂಸ್ಕೃತದಲ್ಲಿ ವಲ್ಮೀಕ ಎಂದರೆ ಹುತ್ತ ಎಂಬ ಅರ್ಥವಿರುವುದು ಪ್ರಸಿದ್ಧವಾದ್ದು. ಆದರೆ ಜೀವಂತ ವ್ಯಕ್ತಿಯ ಮೈಮೇಲೆ ಹಾಗೆ ಹುತ್ತ ಬೆಳೆಯಲಾರದು. ‘ವಾಲ್ಮೀಕಿ’ ಎಂದು ಹೆಸರು ಬರಲು ಬೇರೇನೋ ಕಾರಣವಿರಬಹುದು. ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪುರೇಖೆ’ ಎಂಬ ಕವಿ ಅಡಿಗರ ಕವನದ ಸಾಲು ಒಂದು ಅದ್ಭುತವಾದ ರೂಪಕವಾಗಿ, ಕವಿಯ ಮನಸ್ಸು ಹುತ್ತ ಗಟ್ಟಿದಾಗಲೇ ಒಂದು ಮಹಾ ಕಾವ್ಯ ಸೃಷ್ಟಿಯಾಗಲು ಸಾಧ್ಯ ಎಂಬುದರ ಸೂಚಕವಾಗಿ ಇದ್ದರೂ ಅದು ವಸ್ತುಸಂಗತಿಯ ಅಭಿವ್ಯಕ್ತಿ ಅಲ್ಲ.