‘ಕೃಷಿ ವಿಜ್ಞಾನಿಗಳು ಹಾಗೂ ಪ್ರಾಧ್ಯಾಪಕರು ವಿಶ್ವವಿದ್ಯಾಲಯದ ಚೌಕಟ್ಟಿನಿಂದ ಹೊರಬರಬೇಕು’ ಎಂದು ರಾಜ್ಯದ ಕೃಷಿ ಸಚಿವರು ಹೇಳಿದ್ದಾರೆ (ಪ್ರ.ವಾ., ನ. 18). ಚೌಕಟ್ಟು ಕೃಷಿ ವಿಶ್ವವಿದ್ಯಾಲಯಕ್ಕೆ ಸೀಮಿತವಾಗಿಲ್ಲ. ಸಚಿವರ ಕೈಯಲ್ಲಿರುವ ಕೃಷಿ ಇಲಾಖೆ, ಕೃಷಿ ನಿರ್ದೇಶನಾಲಯಗಳು ಕೊರೊನಾ ಪರಿಣಾಮದ ನಂತರದಲ್ಲಾದರೂ ತಮ್ಮ ಚೌಕಟ್ಟನ್ನು ವಿಶ್ವವಿದ್ಯಾಲಯದ ವಿಸ್ತರಣಾ ವಿಭಾಗಗಳ ಜತೆಜತೆಯಲ್ಲೇ ಬದಲಾಯಿಸಿಕೊಳ್ಳಬೇಕು.
ಈಗ ನಿಯೋಜಿತವಾದ ಪ್ರಾಧ್ಯಾಪಕರು ರೈತರಿಗೆ ನಿಜಕ್ಕೂ ಹೇಗೆ ಉಪಯುಕ್ತರಾಗಿದ್ದಾರೆ ಎಂಬುದನ್ನು ಸಚಿವರು ತಿಳಿಸಲಿ. ‘ಲ್ಯಾಬ್ ಟು ಲ್ಯಾಂಡ್ ವ್ಯಾನ್’ ಹೊಸ ಉಪಕ್ರಮವೇನೂ ಅಲ್ಲ. ಬೈರೇಗೌಡರ ಕಾಲದಲ್ಲೂ ವಾಹನ ಕಳುಹಿಸಿ ಸಂಸ್ಕರಣೆಗೆ ತೋಟಗಾರಿಕಾ ಉತ್ಪನ್ನವನ್ನು ಸಂಗ್ರಹಿಸುವ ಪ್ರಯೋಗ ನಡೆದಿತ್ತು.
ಕೃಷ್ಣ ಬೈರೇಗೌಡರೂ ಬದಲಾವಣೆಯ ಮಾತನಾಡಿದ್ದರು. ಹೆಚ್ಚೇನೂ ಬದಲಾಗಿಲ್ಲ. ಗ್ರಾಮ ಭೇಟಿಯು ಸಮಸ್ಯೆಗಳನ್ನು ಹೆಚ್ಚಾಗಿ ಪರಿಹರಿಸದು. ದಿವಂಗತ ಡಾ. ದ್ವಾರಕಿನಾಥ್ ಎರಡು ಬಗೆಯ ಕೃಷಿ ವಿಸ್ತರಣೆಯನ್ನು ಸೂಚಿಸಿದ್ದರು: ಜೀವನೋಪಾಯಕ್ಕಾಗಿ ಕೃಷಿ ಕೈಗೊಳ್ಳುವ ರೈತರಿಗೆ ಹಾಗೂ ನಗದು ಬೆಳೆ, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡ ಅನುಕೂಲಸ್ಥ ಕೃಷಿ ಉದ್ಯಮಿಗಳಿಗಾಗಿ.
ಒಂದು, ಹೆಚ್ಚಿನ ಮಟ್ಟಿಗೆ ಉಚಿತ. ಇನ್ನೊಂದು, ಶುಲ್ಕ ಆಧಾರಿತ. ಈಗ ಸಬ್ಸಿಡಿ, ಗ್ರಾಂಟ್, ಪರಿಹಾರಗಳನ್ನು ಆಧರಿಸಿದ ಕೃಷಿ ವಿಸ್ತರಣೆ ಸುಸ್ಥಿರವಂತೂ ಅಲ್ಲ. -ಎಚ್.ಎಸ್.ಮಂಜುನಾಥ,ಗೌರಿಬಿದನೂರು