ಚುನಾವಣಾ ಸಮಯದಲ್ಲಿ ಅಭ್ಯರ್ಥಿಗಳು ಎಸಗದ ಅಪರಾಧವೇ ಇಲ್ಲ. ಚುನಾವಣಾ ಆಯೋಗ ಚಾಪೆ ಕೆಳಗೆ ತೂರಿದರೆ ಈ ಅಭ್ಯರ್ಥಿಗಳು ರಂಗೋಲಿ ಕೆಳಗೆ ತೂರಿ ಅಕ್ರಮ ಎಸಗುತ್ತಾರೆ. ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಅಕ್ರಮ ಎಸಗಿದ ನೂರಾರು ಪ್ರಕರಣಗಳು ವರದಿಯಾಗುತ್ತವೆ ಮತ್ತು ಮರೆತು ಹೋಗುತ್ತವೆ.
ಈ ನೂರಾರು ಪ್ರಕರಣಗಳ ಪೈಕಿ ಬೆರಳೆಣಿಕೆಯಷ್ಟು ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗುತ್ತದೆ. ಉಳಿದ ಪ್ರಕರಣಗಳು ಮುಚ್ಚಿಹೋಗುತ್ತವೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಯಾವುದೇ ರಾಜಕಾರಣಿಗೂ ಶಿಕ್ಷೆಯಾದ ನಿದರ್ಶನ ನೆನಪಿಲ್ಲ.
ಚುನಾವಣೆ ಸಮಯದಲ್ಲಿ ಹಣದ ಹೊಳೆ ಹರಿಯುತ್ತದೆ. ಮದ್ಯ, ಸೀರೆ, ವಾಚು ಮುಂತಾದ ಉಡುಗೊರೆಗಳನ್ನು ಹಂಚಿ ಸಂವಿಧಾನಕ್ಕೆ ಕಳಂಕಹಚ್ಚುವ ರಾಜಕಾರಣಿಗಳಿಗೆ ಶಿಕ್ಷೆ ಯಾಕೆ ಇಲ್ಲ? ಪರೀಕ್ಷೆ ಸಂದರ್ಭದಲ್ಲಿ ಕಾಪಿ ಹೊಡೆಯುವ ವಿದ್ಯಾರ್ಥಿ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ ಮತ್ತು ಡಿಬಾರ್ ಎಂಬ ಶಿಕ್ಷೆ ಸಿಗುವುದು ಖಚಿತ. ಆದರೆ ಗಂಭೀರ ಸ್ವರೂಪದ ಅಕ್ರಮ ಎಸಗುವ ರಾಜಕಾರಣಿಗೆ ‘ಕ್ಷಮಾದಾನ’ ಏಕೆ?