ರೈತರ ಸರಣಿ ಸಾವಿನ ವರದಿಯನ್ನು ‘ಪ್ರಜಾವಾಣಿ’ ಯಲ್ಲಿ ವಿವರವಾಗಿ ಓದಿದ ಬಳಿಕ ಈ ಸಾಲುಗಳು ನನ್ನ ಮನಸ್ಸಿನಿಂದ ಹೊರ ಬಂದಿವೆ. ರೈತರು ನಾಡಿನ ಬೆನ್ನೆಲುಬು ಎಂಬ ಗಾದೆ ಎಂದಿಗೂ ಸತ್ಯ. ಎಲ್ಲರೂ ಕೃಷಿಕರಾಗಲು ಸಾಧ್ಯವಿಲ್ಲ. ರೈತರ ಮಕ್ಕಳೂ ತಮ್ಮ ಯೋಗ್ಯತಾನುಸಾರ ಶಿಕ್ಷಣ ಪಡೆದು ಕೃಷಿಯಿಂದ ದೂರವಾಗಿದ್ದಾರೆ.
ಅನ್ನದಾತ ಕೃಷಿ ಮಾಡದೆ ಹೋದರೆ, ಬೆಳೆ ಬಾರದು. ಬೆಳೆ ಇಲ್ಲದೆ, ಆಹಾರ ಧಾನ್ಯಗಳು, ಹಣ್ಣು ಹಂಪಲು, ತರಕಾರಿಗಳು ಸಾಕಷ್ಟು ಸಿಗದೆ, ಆಮದಿನ ಜಾಲಕ್ಕೆ ಮೊರೆ ಹೋಗ ಬೇಕಾಗಬಹುದು, ಸಂಪೂರ್ಣವಾಗಿ. ಇಂದು ಹಲವಾರು ಯೋಜನೆಗಳು ಪಂಚಾಯಿತಿ ಮಟ್ಟದಲ್ಲಿ ಕಾರ್ಯರೂಪಕ್ಕೆ ಬರುತ್ತಿವೆ. ಆದರೆ ಕೃಷಿ ಮತ್ತು ಕೃಷಿಕರ ಸಹಾಯಾರ್ಥವಾಗಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿ ಆಗುತ್ತಿಲ್ಲ.
ಇಡೀ ದೇಶಕ್ಕೆ ಬೇಕಾದ ಧಾನ್ಯ ಮತ್ತು ಆಹಾರ ವಸ್ತುಗಳನ್ನು ರೈತರೇ ‘ಭಾರ’ ಹೊತ್ತು ಬೆಳೆಯಬೇಕು. ರೈತರು ಆರ್ಥಿಕ ಭಾರವನ್ನು ಹೊರಲಾರದೆ, ಸಾಲ ಸೋಲ ಮಾಡಿ ಬಡ್ಡಿ ವಗೈರೆಯಿಂದ ನಿರಾಶರಾಗಿ, ಹತಾಶರಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ರೈತರ ಸರಣಿ ಸಾವನ್ನು ‘ಅಭಿವೃದ್ಧಿ’ ತಡೆಯುತ್ತಿಲ್ಲ. ಪಂಚಾಯಿತಿ ಮಟ್ಟದಲ್ಲಿ ಕೃಷಿಗೆ ಪೂರಕವಾಗಿ ಸರ್ಕಾರ ಸಹಾಯಹಸ್ತ ಕೊಡಬೇಕು. ಅವರ ಬೆಳೆಗೆ ಸರಿ ಯಾದ ಬೆಲೆ ಸಿಗುವಂತೆ ಮಾಡಬೇಕು. ಸಹಕಾರ ತತ್ವದಡಿ ಬೆಳೆ ತೆಗೆಯುವ ಸಾಧ್ಯತೆ ಕುರಿತು ಚಿಂತಿಸಬೇಕು.