ಚಿತ್ರಗಳ ಮೂಲಕ ಅಪಾಯ ಸೂಚನೆಯನ್ನು ಸಿಗರೇಟ್ ಪ್ಯಾಕ್ ಮೇಲೆ ಶೇಕಡ 85ರಷ್ಟು ಸ್ಥಳದಲ್ಲಿ ಪ್ರದರ್ಶಿಸಬೇಕು ಎಂದು ಕೇಂದ್ರ ಸರ್ಕಾರ ನಿಯಮ ರೂಪಿಸಿದೆ. ಇದನ್ನು ಪ್ರತಿಭಟಿಸಿ ಸಿಗರೇಟ್ ತಯಾರಕರು ಈ ತಿಂಗಳ ಒಂದರಿಂದ ಕಾರ್ಖಾನೆಗಳನ್ನು ಮುಚ್ಚಿದ್ದಾರೆ. ಕಾರ್ಖಾನೆಗಳನ್ನು ಶಾಶ್ವತವಾಗಿಯೇ ಮುಚ್ಚಿದರೆ ಹೆಚ್ಚಿನ ಮಟ್ಟಿಗೆ ಸಂತೋಷಪಡುವವರು ಮಹಿಳೆಯರು.
ತಂಬಾಕು ಪದಾರ್ಥಗಳ ಸೇವನೆಯಿಂದ ಆರೋಗ್ಯ ವೃದ್ಧಿಯಂತೂ ಆಗುವುದಿಲ್ಲ ಎಂಬುದು ಅದನ್ನು ಉಪಯೋಗಿಸುವವರಿಗೆ ಮತ್ತು ಉಪಯೋಗಿಸದೆ ಇರುವವರಿಗೆ ಎಲ್ಲರಿಗೂ ತಿಳಿದಿದೆ. ಪ್ರತಿಭಟನೆಯಿಂದಾಗಿ ದಿನಕ್ಕೆ 350 ಕೋಟಿ ರೂಪಾಯಿ ನಷ್ಟವಾಗುತ್ತದೆ ಎಂದು ಟೊಬ್ಯಾಕೊ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಟಿಐಐ) ಅಂದಾಜು ಮಾಡಿದೆ. ಅಂದರೆ ಅಷ್ಟೂ ಹಣ ಜನರ ಬಳಿಯೇ ಉಳಿದಿದೆ ಎಂದು ಭಾವಿಸಬಹುದು.
ಎಚ್ಚರಿಕೆ ಸೂಚನೆಯನ್ನು ಮನಸ್ಸಿಗೆ ತಂದುಕೊಂಡು ಅದರ ಬಳಕೆ ಕಡಿಮೆ ಮಾಡುವವರು ಅತಿ ವಿರಳ. ಎಷ್ಟೇ ಎಚ್ಚರಿಕೆ ನೀಡಿದರೂ ಅದು ಸರ್ಕಾರದ ಒತ್ತಡಕ್ಕೆ ಹಾಕಿರುವುದು ಎಂದುಕೊಂಡು ತಮ್ಮ ಅಭ್ಯಾಸವನ್ನು ಮುಂದುವರಿಸಿಕೊಂಡು ಹೋಗುವವರೇ ಹೆಚ್ಚು. ಇದನ್ನು ವಿರೋಧಿಸಿ ಸಿಗರೇಟ್ ತಯಾರಿಕಾ ಕಾರ್ಖಾನೆಗಳನ್ನು ಮುಚ್ಚಿದರೆ ಅದು ಅವರಿಗೇ ನಷ್ಟ. ಕಾರ್ಖಾನೆಗಳಿಗೆ ನಷ್ಟ, ಕುಟುಂಬಗಳಿಗೆ ಲಾಭ.