ಸುತ್ತೂರಿನ ಜಾತ್ರೆ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಉಡುಪಿಯ ಬಾರ್ಕೂರು ಮಹಾಸಂಸ್ಥಾನದ ಹರಿಹರಾತ್ಮಕ ಪೀಠದ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ‘ಬುದ್ಧಿಜೀವಿಗಳೆಂಬ ಕಳೆ ಕೀಳದಿದ್ದರೆ ಧರ್ಮದ ಕೊಲೆಯಾಗುತ್ತದೆ’ ಎಂದು ಹೇಳಿರುವುದು (ಪ್ರ.ವಾ., ಫೆ. 8) ಅಸಂಬದ್ಧವಾಗಿದೆ.
ಇಂದಿನ ನಮ್ಮ ಸಾಮಾಜಿಕ ಜೀವನವನ್ನು ಮಾನವ ಧರ್ಮದಿಂದ ದೂರ ಮಾಡುತ್ತಿರುವುದು ವಿವಿಧ ಧರ್ಮಾಚರಣೆಯ ಹೆಸರಿನಲ್ಲಿ ಹುಲುಸಾಗಿ ಬೆಳೆಯುತ್ತಿರುವ ಧಾರ್ಮಿಕ ಮೂಲಭೂತವಾದದ ಕಳೆಯಾಗಿದೆ.
ಒಂದೆಡೆ ಮೌಢ್ಯ ಮತ್ತು ಕಂದಾಚಾರಗಳನ್ನೇ ಧರ್ಮವೆಂದು ವ್ಯಾಖ್ಯಾನಿಸುತ್ತಾ, ಇನ್ನೊಂದೆಡೆ ಇಂದಿನ ವಿವಿಧ ಮತಗಳ ವಕ್ತಾರಿಕೆ ವಹಿಸಿರುವ ಮಠ, ಮಸೀದಿ, ಚರ್ಚು ಇತ್ಯಾದಿಗಳ ಕರ್ಮಠ ಮುಖ್ಯಸ್ಥರು ಸಮಾಜ ಸೇವೆಯ ಹೆಸರಿನಲ್ಲಿ ಬಂಡವಾಳವಾದದ ಪಾದಸೇವೆಯಲ್ಲಿ ನಿರತರಾಗಿದ್ದಾರೆ. ಆದರೆ ವಾಸ್ತವದಲ್ಲಿ ಸಾಮಾಜಿಕ ಅಸಮಾನತೆಯನ್ನು ಪ್ರೋತ್ಸಾಹಿಸುತ್ತಾ ನಿಜವಾದ ಸಾಮಾಜಿಕ ಪ್ರಗತಿಗೆ ಅಡ್ಡಿಯಾಗಿದ್ದಾರೆ.