ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿ. ಈ ಹಬ್ಬಕ್ಕೆ ಪಟಾಕಿ, ಮತಾಪು, ಭೂಚಕ್ರ, ರಾಕೆಟ್, ಆಟಂಬಾಂಬ್ ಸುಡುವುದು ಸರ್ವೇಸಾಮಾನ್ಯ. ಆದರೆ ಇದರಿಂದ ಆಗುವ ಅನಾಹುತಗಳಿಗೆ ಲೆಕ್ಕವೇ ಇಲ್ಲ. ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಸುಟ್ಟಗಾಯ, ಕಣ್ಣಿಗೆ ಹಾನಿ ಮಾಡಿಕೊಂಡು ಆಸ್ಪತ್ರೆಗಳಲ್ಲಿ ನರಳುವವರ ಸ್ಥಿತಿಯನ್ನು ಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ.
ದೀಪಾವಳಿಯ ಮೂರು ನಾಲ್ಕು ದಿನಗಳು ಹಿರಿಯ ಜೀವಗಳಿಗೆ ಮತ್ತು ಅನಾರೋಗ್ಯದಿಂದ ಬಳಲುವವರಿಗೆ ಆಗುವ ತೊಂದರೆ ಅಷ್ಟಿಷ್ಟಲ್ಲ. ಆ ಸಮಯದಲ್ಲಿ ಎಲ್ಲೆಡೆ ಯುದ್ಧಭೂಮಿಯ ಗುಂಡಿನ ಮೊರೆತದಂತ ಶಬ್ದ. ಪಟಾಕಿ ಹೊಗೆ, ಓಡಾಡುವಾಗ ಹೊಗೆಯ ಅಡಚಣೆ. ಕಣ್ಣಿಗೆ ಅಥವಾ ಕೈಕಾಲುಗಳಿಗೆ ಬೆಂಕಿ ತಾಗಿ ಸುಟ್ಟ ಗಾಯಗಳಾಗುತ್ತವೆ.
ಪಟಾಕಿ ಹೊಗೆಯಿಂದ ಹೃದಯ ಸಂಬಂಧಿ ಕಾಯಿಲೆಯವರಿಗೆ, ಆಸ್ತಮಾ ಪೀಡಿತರಿಗೆ, ಉಸಿರಾಟದ ತೊಂದರೆ ಉಳ್ಳವರಿಗೆ ನರಕಯಾತನೆ. ಪ್ರತಿ ರಸ್ತೆಯಲ್ಲೂ ಪಟಾಕಿ ಸುಟ್ಟ ಕಾಗದದ ಚೂರುಗಳು ಚೆಲ್ಲಾಪಿಲ್ಲಿಯಾಗಿ ಎಲ್ಲೆಂದರಲ್ಲಿ ಕಸವಾಗಿ ಬಿದ್ದಿರುತ್ತದೆ.
ಆದ್ದರಿಂದ ಜನವಸತಿ ಪ್ರದೇಶದಲ್ಲಿ ಭಾರಿ ಶಬ್ದ ಉಂಟುಮಾಡುವ ಪಟಾಕಿಗಳನ್ನು, ಆಟಂಬಾಂಬ್ ನಿಷೇಧಿಸಬೇಕು. ಅದಕ್ಕಾಗಿ ದೊಡ್ಡ ದೊಡ್ಡ ಮೈದಾನಗಳಲ್ಲಿ ಬೇಕಾದರೆ ಅವಕಾಶ ಕೊಡಲಿ. ಸಾರ್ವಜನಿಕರರು ಕೂಡ ಬೆಳಕಿನ ಹಬ್ಬಕ್ಕೆ ಬೆಳಕು ತರುವಂಥ ಮತಾಪು, ಸುರುಸುರುಬತ್ತಿ, ಭೂಚಕ್ರ, ಇನ್ನಿತರೆ ಸಣ್ಣ ಪುಟ್ಟ ಪಟಾಕಿಗಳನ್ನು ಹಾರಿಸಲಿ.
ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕೆಂದು ವಿನಂತಿ.