ಜೋಳದ ಪೋಷಕಾಂಶಗಳು ಅಕ್ಕಿಗಿಂತ ಅದೆಷ್ಟೊ ರೀತಿಯಲ್ಲಿ, ದೈಹಿಕ ಕೆಲಸ ಮಾಡುವವರಿಗೆ ಆರೋಗ್ಯದಾಯಕವಾಗಿತ್ತು. ಮೇಲಾಗಿ ಭತ್ತಕ್ಕೆ ಸುರಿಯುವ ವಿಷದ ರಾಸಾಯನಿಕಗಳಿಗೆ ಹೋಲಿಸಿದರೆ ಜೋಳ ಅದೆಷ್ಟೊ ಪಾಲು ಸುರಕ್ಷಿತ ಎನ್ನಬೇಕು. ಭತ್ತ ಬೆಳೆಯಲು ನೀರೂ ಅಪಾರ ಪ್ರಮಾಣದಲ್ಲಿ ದುರ್ಬಳಕೆಯಾಗುತ್ತಿದೆ. ವಿಷವಸ್ತುಗಳು ಬೆರೆತ ಈ ನೀರು ಲೋಕವನ್ನೆಲ್ಲ ರೋಗಗ್ರಸ್ತ ಮಾಡುತ್ತಿದೆ.
ಇತ್ತ ದಕ್ಷಿಣ ಕರ್ನಾಟಕದ ರಾಗಿಯೂ ಮೂಲೆಗುಂಪಾಗುತ್ತಿದೆ. ಮುದ್ದೆಗಿಂತ ಅನ್ನ ಬೇಯಿಸುವುದೇ ಸುಲಭವಾಗಿದ್ದರಿಂದ ಮಳೆಯಾಶ್ರಿತ ಈ ಬೆಳೆಗೂ ಬೇಡಿಕೆ ಇಲ್ಲವಾಗುತ್ತಿದೆ. ರಾಗಿಯಲ್ಲಿ ಇತರೆಲ್ಲ ಧಾನ್ಯಗಳಿಗಿಂತ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಅಂಶ ಇದ್ದು, ರೈತರ ಮೂಳೆ ಗಟ್ಟಿ ಇಡುವಲ್ಲಿ, ಮಹಿಳೆಯರ ಋತುಬಂಧದ ನಂತರದ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡಲು ನೆರವಾಗುತ್ತಿತ್ತು.
`ಹಸಿರು ಕ್ರಾಂತಿ'ಯ ಅಬ್ಬರದಲ್ಲಿ ನಾವು ನವಣೆ, ಸಜ್ಜೆ, ಬರಗು, ಆರಕ ಮುಂತಾದ ಮಹತ್ವದ ತೃಣಧಾನ್ಯಗಳನ್ನು ಕಳೆದುಕೊಂಡೆವು. ನಂತರದ ಹಂತವಾಗಿ ಈಗ ಜೋಳ, ರಾಗಿಯನ್ನೂ ಮನೆಯಿಂದ ಆಚೆ ನೂಕಲು ಹೊರಟಿದ್ದೇವೆ.
ಅಗ್ಗದ ವೋಟ್ಬ್ಯಾಂಕ್ ರಾಜಕೀಯದ ಭಾಗವಾಗಿ ಈ ಒಂದು ರೂಪಾಯಿ ಅಕ್ಕಿ ಎಂಬುದು ಇಡೀ ಸಮಾಜವನ್ನು ನೀವಂದಂತೆ ಸಾಂಸ್ಕೃತಿಕ ಬೆಂಗಾಡಿನತ್ತ ಅಷ್ಟೇ ಅಲ್ಲ, ಆಸ್ಪತ್ರೆಗಳತ್ತ, ಗ್ರಾಮೀಣ ನೆಲೆಗಟ್ಟಿನ ಪತನದತ್ತ, ಪರಿಸರ ದಿವಾಳಿತನದತ್ತ ತಳ್ಳುತ್ತಿದೆ. ಸರ್ಕಾರ ಅಗ್ಗದ ಆಹಾರ ಕೊಡಬೇಕು ಆದರೆ ಸ್ಥಳೀಯ ಆಹಾರ ಸಂಸ್ಕೃತಿಯನ್ನು ತುಳಿಯಬಾರದು.
- ಎಂ.ಬಿ.ರಮಾಕಾಂತ , ಬೆಂಗಳೂರು .