‘ರಾಮ ಮಂದಿರ ನಿರ್ಮಾಣ ಆಗಬೇಕು ಎಂಬುದು ಕೋಟ್ಯಂತರ ಜನರ ಆಶಯವಾಗಿದೆ. ಹಾಗಾಗಿ ಸಂತರೆಲ್ಲ ಒಂದಾಗಿ ರಾಮಮಂದಿರ ನಿರ್ಮಾಣ ಮಾಡಿ’ ಎಂದು ಉಡುಪಿಯ ಪೇಜಾವರ ಮಠದಲ್ಲಿ ಸನ್ಮಾನಗೊಂಡ ಸಂದರ್ಭದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹೇಳಿದ್ದಾರೆ (ಪ್ರ.ವಾ., ಜೂನ್ 19).
ರಾಮಮಂದಿರ ನಿರ್ಮಾಣ ವಿಷಯ ವಿವಾದಿತ. ಬಾಬ್ರಿ ಮಸೀದಿಯನ್ನು ನಿರ್ನಾಮಗೊಳಿಸಿದ ಪ್ರಕರಣ ಮತ್ತು ಅದಕ್ಕೆ ಸಂಬಂಧಪಟ್ಟ ರಾಜಕೀಯ ಪ್ರಭಾವಿಗಳ ಮೇಲೆ ಕಾನೂನುರೀತ್ಯ ಮೊಕದ್ದಮೆ ದಾಖಲಾಗಿರುವುದು ಎಲ್ಲರಿಗೂ ತಿಳಿದಿದೆ. ಬಾಬ್ರಿ ಮಸೀದಿ ಧ್ವಂಸದ ನಂತರ ಉಂಟಾದ ಕ್ಷೋಭೆಯೂ ಇತ್ತೀಚೆಗಿನ ಚರಿತ್ರೆಯಲ್ಲಿ ದಾಖಲಾಗಿದೆ.
ಇಂತಹ ಸಂದರ್ಭದಲ್ಲಿ ರಾಮಮಂದಿರ ನಿರ್ಮಿಸಬೇಕೆಂದು ನ್ಯಾಯಮೂರ್ತಿಗಳೇ ಕರೆ ನೀಡುವುದು ಎಷ್ಟು ಸಮಂಜಸ? ಮಹತ್ವದ ಹುದ್ದೆಯ ಹೊಣೆ ಹೊತ್ತ ಮತ್ತು ದೇಶದ ಸಂವಿಧಾನಕ್ಕೆ ಪ್ರತಿಜ್ಞಾಬದ್ಧರಾದ ನ್ಯಾಯಮೂರ್ತಿಗಳು ಈ ರೀತಿಯ ಹೇಳಿಕೆ ನೀಡುವುದು ಸರಿಯೇ?