ರಾಜ್ಯದಲ್ಲಿ ಉತ್ಪಾದನೆ ಯಾಗುತ್ತಿರುವ ವಿದ್ಯುತ್ತಿನಲ್ಲಿ ಶೇಕಡ 39 ರಷ್ಟನ್ನು ರೈತರಿಗೆ ಕೊಡುತ್ತಿದ್ದು, ಉಚಿತ ವಿದ್ಯುತ್ ನೀಡುತ್ತಿರುವುದನ್ನು ಮರುಪರಿಶೀಲನೆ ನಡೆಸಲಾಗುವುದು ಎಂದು ಇಂಧನ ಸಚಿವ ಡಿ. ಕೆ. ಶಿವಕುಮಾರ್ ವಿಧಾನ ಪರಿಷತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. (ಪ್ರ.ವಾ. ಜೂನ್ 25).
ಆದರೆ ಕೆಪಿಸಿಎಲ್ ಉತ್ಪಾದಿಸುವ ವಿದ್ಯುತ್ತಿನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ)ಯೊಂದೇ ಶೇಕಡ 50 ರಷ್ಟನ್ನು ಖರೀದಿಸುತ್ತಿದೆ. ಅಲ್ಲದೆ ನಿಗಮಕ್ಕೆ ₨ 3321 ಕೋಟಿ ಬಾಕಿ ಹಣವನ್ನೂ ಪಾವತಿಸಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ (ಪ್ರ.ವಾ. ಜೂ. 14).ಹಾಗಾದರೆ ಬೆಂಗಳೂರಿಗೆ, ರೈತರ ಪಂಪ್ಸೆಟ್ಗೆ ನೀಡುವ ವಿದ್ಯುತ್ ಸರಬರಾಜು ಹೊರತುಪಡಿಸಿ, ಉಳಿಕೆಯಾದ ಶೇಕಡ 11ರಷ್ಟು ವಿದ್ಯುತ್ನಲ್ಲಿಯೇ ಇಡೀ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸಲಾಗುತ್ತಿದೆಯೆ? ಇದು ಸಾಧ್ಯವೆ? ಇದನ್ನು ನಂಬಬೇಕೆ?
ಗುಜರಾತ್, ಮಹಾರಾಷ್ಟ್ರ ಹಾಗೂ ತಮಿಳುನಾಡುಗಳಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡುತ್ತಿಲ್ಲ ಎಂದು ಹೇಳುವ ಮೊದಲು ಇಂಧನ ಸಚಿವರು ಕೃಷಿಭೂಮಿಗೆ ನೀರೊದಗಿಸಲು ಅಲ್ಲಿರುವ ಉತ್ತಮ ನೀರಾವರಿ ಯೋಜನೆಗಳನ್ನು ಗಮನಿಸಬೇಕಿತ್ತು.
ಬೆಳೆಗೆ ನ್ಯಾಯಯುತ, ವೈಜ್ಞಾನಿಕ ಬೆಲೆ ಹಾಗೂ ಭೂಮಿಗೆ ಮೂಲಸೌಕರ್ಯಗಳನ್ನು ಒದಗಿಸಿದ್ದೇ ಆದರೆ ಉಚಿತ ವಿದ್ಯುತ್, ಸಹಾಯಧನಗಳನ್ನು ರೈತರು ಏಕೆ ಕೇಳುತ್ತಾರೆ? ಕೆಲವೇ ರೈತರಿಗೆ ಉಚಿತ ವಿದ್ಯುತ್ ನೀಡಿ ಎಲ್ಲ ರೈತರಿಗೂ ಎಲ್ಲವನ್ನೂ ಉಚಿತವಾಗಿ ಕೊಟ್ಟಿದ್ದೇವೆ ಎಂಬಂತೆ ಪ್ರಚಾರ ಮಾಡುವುದು ಸರಿಯಲ್ಲ.