ರಾಜ್ಯ ಸರ್ಕಾರವು ಬಡ ಹಾಗೂ ಅಸಂಘಟಿತ ಕಟ್ಟಡ ಕಾರ್ಮಿಕರಿಗಾಗಿ 2006 ರಲ್ಲಿ ಕಟ್ಟಡ ಕಾರ್ಮಿಕರ ಮಂಡಳಿಯೊಂದನ್ನು ಸ್ಥಾಪಿಸಿ ಆ ಮೂಲಕ ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳಾದ ಮರಣ ನಿಧಿ, ಮದುವೆಗೆ ಸಹಾಯ ಧನ, ಮಕ್ಕಳಿಗಾಗಿ ವಿದ್ಯಾರ್ಥಿ ವೇತನ ಹಾಗೂ ವೃದ್ಧರಿಗೆ ಪಿಂಚಣಿ ಇತ್ಯಾದಿ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆಯೊಂದನ್ನು ಕಲ್ಪಿಸಿದೆ.
ಇದಕ್ಕಾಗಿ ದೊಡ್ಡ ದೊಡ್ಡ ಕಟ್ಟಡಗಳ ಮಾಲೀಕರಿಂದ ಸೆಸ್ ವಸೂಲಿ ಮಾಡುವುದರ ಮೂಲಕ ಮಂಡಳಿಯು ಸುಮಾರು 1200 ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಿದೆ. ಇಂತಹ ಉದಾತ್ತ ಉದ್ದೇಶಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಮಂಡಳಿ ಕಳೆದ ಆರೇಳು ತಿಂಗಳಿಂದ ಕಾರ್ಯ ಪ್ರವೃತ್ತವಾಗಿಲ್ಲ. ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳು ದೊರಕದೆ, ಮಂಡಳಿಯ ಅಸ್ತಿತ್ವದ ಬಗ್ಗೆಯೇ ಸಂಶಯ ಬರುತ್ತಿದೆ.
ಸಾವಿರಾರು ಅರ್ಜಿಗಳು ಇತ್ಯರ್ಥಕ್ಕಾಗಿ ಕಾಯುತ್ತಾ ಕುಳಿತಿವೆ. ಕಾರ್ಮಿಕ ಇಲಾಖೆಯಲ್ಲಿ ವಿಚಾರಿಸಿದರೆ, ಉನ್ನತ ಅಧಿಕಾರಿಯೊಬ್ಬರು ನಿವೃತ್ತರಾದಾಗಿನಿಂದ ಹೊಸದಾಗಿ ಯಾರೂ ನೇಮಕವಾಗಿಲ್ಲವೆನ್ನುತ್ತಾರೆ. ಉನ್ನತ ಅಧಿಕಾರಿಗಳಾಗಲಿ, ಸಚಿವರಾಗಲಿ ಈ ಬಗ್ಗೆ ದಿವ್ಯ ಮೌನವಾಗಿರುವುದಾದರೂ ಏಕೆ?
-