ಕನ್ನಡ ಹಾಡು ಎಲ್ಲೆಡೆ ಕೇಳಲಿ ಎಂಬ ಸೌಮ್ಯ ಪಾಟೀಲರ ಆಶಯದ ಪತ್ರಕ್ಕೆ ನನ್ನ ಪ್ರತಿಕ್ರಿಯೆ ಹೀಗಿದೆ. ಬೆಂಗಳೂರಿನ ಮಾಲ್ಗಳಲ್ಲಿರಲಿ ಕರ್ನಾಟಕದ ಬಹುತೇಕ ಊರುಗಳ ಅಂಗಡಿ, ಹೋಟೆಲ್, ಬಸ್ ನಿಲ್ದಾಣ ಇತ್ಯಾದಿಗಳಲ್ಲಿ ಕನ್ನಡ ಹಾಡುಗಳು ಕೇಳದ, ಅಕ್ಷರಗಳು ಕಾಣದ ಪರಿಸ್ಥಿತಿ ಇದೆ.
ಇತ್ತೀಚೆಗೆ ಕೆಲ ಮಿತ್ರರೊಂದಿಗೆ ಚೆನ್ನೈಗೆ ಹೋಗಿದ್ದೆ. ಅಲ್ಲಿ ತಮಿಳು, ಇಂಗ್ಲಿಷ್, ಕೇಂದ್ರ ಸರ್ಕಾರದ ಕಚೇರಿಗಳ ಮುಂದೆ ಹಿಂದಿ ನಾಮಫಲಕ ಬಿಟ್ಟರೆ ಬೇರೆಲ್ಲೂ ಅನ್ಯಭಾಷೆಯ ಫಲಕಗಳು ಕಾಣಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ತಮಿಳು ಹಾಡುಗಳು ಕೇಳಿ ಬರುತ್ತಿದ್ದವು.
ಸಂಕ್ರಾಂತಿಯ ದಿನ ಸಾವಿರಾರು ಜನ ಮರೀನಾ ಬೀಚ್ನಲ್ಲಿ ಸೇರಿದ್ದರು. ಅಲ್ಲೂ ಪೊಲೀಸರು ಜನರಿಗೆ ತಮಿಳಿನಲ್ಲಿ ಎಚ್ಚರಿಕೆಯ ಸಂದೇಶ ನೀಡುತ್ತಿದ್ದರು. ಅವರ ಮುದ್ರಿತ ಮಾತುಗಳಲ್ಲಿ ಒಂದೇ ಒಂದು ಇಂಗ್ಲಿಷ್ ಪದವೂ ಇರಲಿಲ್ಲ!
ರಾಜ್ಯದ ನಗರಗಳಲ್ಲಿ ಕನ್ನಡ ಅಕ್ಷರಗಳನ್ನೂ, ಧ್ವನಿಯನ್ನೂ ಹುಡುಕಬೇಕಿದೆ. ಕನ್ನಡದ ಕಾಳಜಿ ಇಲ್ಲದ ನಮ್ಮವರು ಪ್ರಶ್ನೆ ಮಾಡುವುದಿಲ್ಲ.