ಪ್ರತಿಯೊಂದು ರಾಜಕೀಯ ಪಕ್ಷದ ನಾಯಕರೂ ತಮ್ಮ ವಿರೋಧಿಗಳನ್ನು ತೆಗಳುವುದರಲ್ಲಿ ನಿಸ್ಸೀಮರು. `ನಾವು ಮಾಡಿರುವುದು ಸಾಸಿವೆ ಕಾಳಿನಷ್ಟು, ಅವರು ಸಾವಿರ ಕೋಟಿ ಮಾಡಿದ್ದಾರೆ~ ಎಂದರೆ ಜನ ಒಪ್ಪಿಕೊಳ್ಳುತ್ತಾರೆಯೇ? ಮತದಾರರಿಗೆ `ರಾಜಕೀಯ ವಿವೇಚನೆ ಇಲ್ಲ~ ಎಂದರೆ ಮತದಾರ `ಇವರ ಕತೆ ಜಾತಕ ನಮಗೆ ಗೊತ್ತು, ನಾವು ದಡ್ಡರಲ್ಲ~ ಎನ್ನುತ್ತಾರೆ.
ಇದೀಗ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣ್ಯಂ ವರದಿಗಳ ಪ್ರಕಾರ, ಕಾಂಗ್ರೆಸ್, ಬಿಜೆಪಿ ಮತ್ತು ಜನತಾದಳ ನಾಯಕರುಗಳು ಗಣಿಗಾರಿಕೆ ಮತ್ತು ಜಮೀನು ಒತ್ತುವರಿ ಹಗರಣಗಳಲ್ಲಿ ಕಳಂಕಿತರಾಗಿದ್ದಾರೆ.
ಈ ಕಳಂಕಿತ ನಾಯಕರಿಂದ ಪಕ್ಷಗಳಿಗೆ ಕೂಡ ಕಳಂಕ ಅಂಟಿಕೊಂಡಿದೆ. ಕಾಂಗ್ರೆಸ್ ಪಕ್ಷ, ಹಿಂದೆ ಹಗರಣಗಳ ರೂವಾರಿಗಳಾದ ಸುಖರಾಂ, ನಟವರ್ಸಿಂಗ್ರನ್ನು ಪಕ್ಷದಿಂದ ಉಚ್ಚಾಟಿಸಿ ಜನರ ಹೊಗಳಿಕೆಗೆ ಪಾತ್ರವಾಗಿತ್ತು. ಅದರಂತೆಯೇ, ಈಗಲೂ ತಮ್ಮ ಪಕ್ಷದ ಎಲ್ಲಾ ಕಳಂಕಿತರನ್ನೂ ಉಚ್ಚಾಟಿಸುವುದಿಲ್ಲವೇಕೆ?
ಅವನು `ಡಕಾಯಿತ, ನಾನು ಪಿಕ್ಪಾಕೆಟ್~ ಮಾಡುವವ ಎನ್ನುವ ಕಳಂಕಿತರನ್ನು ರಕ್ಷಿಸಲು ಹೋಗಿ ಪಕ್ಷಕ್ಕೇ ಕಳಂಕ ತರುವುದು ಸರಿಯೇ? ಆಮಿಷಗಳನ್ನು ತೋರಿಸಿ ಮತ ಪಡೆಯಬಹುದು, ಕಳಂಕ ಹೋಗುತ್ತದೆಯೇ? ಕಳಂಕಿತರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಕೋಟಿ, ಕೋಟಿ ರೂಪಾಯಿ ಸುರಿದರೂ ಕಳಂಕ ಹೋಗುವುದೇ?
ಇದಕ್ಕಾಗಿಯಲ್ಲವೇ, ವಿದ್ಯಾಭ್ಯಾಸ, ಸೌಕರ್ಯ ಮತ್ತು ಐಶ್ವರ್ಯವಿಲ್ಲದ ಕಳಂಕರಹಿತ ಅಣ್ಣಾ ಹಜಾರೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದುದು, ಅಣ್ಣಾರನ್ನು ಸೋಲಿಸಬೇಕಾದವರು ಅಣ್ಣಾರವರಿಗಿಂತ ಹೆಚ್ಚು ಪರಿಶುದ್ಧವಾಗಿರಬೇಕಲ್ಲವೇ?