ಬಸವನಗುಡಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗಿರಿನಗರ ವಾರ್ಡಿನ ನಂ.36, 16ನೇ ಮುಖ್ಯ ರಸ್ತೆಯಲ್ಲಿ ಇರುವ ಮನೆ ಮುಂದೆ ಕಸದ ತಿಪ್ಪೆಯಾಗಿದೆ. ಈ ಮನೆಯನ್ನು ನಾವು ಹತ್ತು ವರ್ಷಗಳ ಹಿಂದೆ ರಾಜ್ಕುಮಾರ್ ಎಂಬುವರಿಗೆ ಮಾರಾಟ ಮಾಡಿದ್ದೆವು. ಆದರೆ ಇದು 10 ವರ್ಷಗಳಿಂದ ಪಾಳು ಬಿದ್ದಿದ್ದು, ಸತ್ತ ಪ್ರಾಣಿಗಳ ಸ್ಮಶಾನವಾಗಿದೆ.
ಮನೆಯ ಮಾಲೀಕರು ಇತ್ತ ಸುಳಿಯದ ಕಾರಣ, ಅಲ್ಲಿನ ನಿವಾಸಿಗಳು ನಿತ್ಯ ನಮಗೆ ಕರೆ ಮಾಡುತ್ತಾರೆ. ಮನೆಯ ಮಾಲೀಕರನ್ನು ಹುಡುಕಿ ಹುಡುಕಿ ಸಾಕಾಗಿದೆ. ಅಲ್ಲಿ ಕಸದ ಹಿಮಾಲಯ ಪರ್ವತವೇ ಬಿದ್ದಿದೆ. ದುರ್ವಾಸನೆ, ವಾಕರಿಕೆ, ವಾಂತಿ ಬರುವ ಈ ಮನೆ ಮುಂದೆ ವಾಸ ಮಾಡುವುದು ಒಂದು ನರಕವೇ ಸರಿ. ಇದು ಹೀಗೆ ಮುಂದುವರೆದರೆ ಕಳ್ಳಕಾಕರ ಅಡಗುತಾಣವೂ ಆಗಬಹುದು. ಈ ಮಾಲೀಕನನ್ನು ಹುಡುಕಲು ನಾವು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಸ್ಥಳೀಯ ಶಾಸಕರೇ ದಯವಿಟ್ಟು ಈ ಸ್ಥಳದ ಕಸವನ್ನು ತಕ್ಷಣ ತೆಗೆಸಿ ಪುಣ್ಯ ಕಟ್ಟಿಕೊಳ್ಳಿ.