ಈ ಬಾರಿಯ ರೈಲ್ವೆ ಬಜೆಟ್ನಲ್ಲಿ ಸ್ವಚ್ಛತಾ ಉದ್ದೇಶಗಳಿಗೆ ನಿಗದಿತ ವೆಚ್ಚವನ್ನು ಹೆಚ್ಚಿಸಿರುವುದು ಸಕಾಲಿಕವಾಗಿದೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಸಂಚರಿಸುವ ರೈಲುಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ರೈಲು ನಿಲ್ದಾಣ ಮತ್ತು ಬೋಗಿಗಳಲ್ಲಿ ಶೌಚಾಲಯಗಳ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಶುಭ್ರಗೊಳಿಸಿದ ಹಾಸಿಗೆ ಹೊದಿಕೆ ಒದಗಿಸುವುದು, ಕ್ರಿಮಿಕೀಟ, ಇಲಿಗಳ ಹಾವಳಿ ನಿಯಂತ್ರಣದ ನಿಟ್ಟಿನಲ್ಲಿ ಬೋಗಿಗಳಲ್ಲಿ
ಜೈವಿಕ ಶೌಚಾಲಯಗಳ ನಿರ್ಮಾಣ, ಕಸ ವಿಂಗಡಣೆ ಮತ್ತು ಪುನರ್ಬಳಕೆ ಕೇಂದ್ರಗಳ ಸ್ಥಾಪನೆ, ದೂರ ಪ್ರಯಾಣದ ರೈಲು ಬೋಗಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಗ್ರಾಹಕರು ಎಸ್ಎಂಎಸ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಗಮನ ಸೆಳೆಯುವ ಸೇವೆ ಆರಂಭಿಸುವುದಾಗಿ ಸಚಿವರು ಹೇಳಿರುವುದು ಸ್ವಾಗತಾರ್ಹ.
ಕೇವಲ ಬಜೆಟ್ನಲ್ಲಿ ಹಣ ತೆಗೆದಿರಿಸಿ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ.
ರೈಲ್ವೆ ಇಲಾಖೆಯ ಸಿಬ್ಬಂದಿ ಪ್ರಾಮಾಣಿಕವಾಗಿ ತಮ್ಮ ಇಚ್ಛಾಶಕ್ತಿ ಮತ್ತು ಬದ್ಧತೆ ಪ್ರದರ್ಶಿಸಬೇಕು. ಪ್ರಯಾಣಿಕರು ಕೂಡ ತಿಂಡಿ ತಿನಿಸು, ಪಾನೀಯದ ಲೋಟಗಳು ಮತ್ತು ಇತರ ತ್ಯಾಜ್ಯವನ್ನು ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಎಸೆಯುವ, ವಿವೇಚನಾರಹಿತವಾಗಿ ಶೌಚಾಲಯಗಳನ್ನು ಬಳಸುವ, ರೈಲಿನಲ್ಲಿ ಸ್ವಚ್ಛತೆಯನ್ನು ಉಪೇಕ್ಷಿಸುವ ರೂಢಿಗೆ ಕಡಿವಾಣ ಹಾಕಿಕೊಳ್ಳಬೇಕು. ಈ ಮೂಲಕ ರೈಲು ಪ್ರಯಾಣವನ್ನು ಇನ್ನಷ್ಟು ಹಿತಕಾರಿಯಾಗಿಸಲು ಸಹಕರಿಸಬೇಕು.