ಸಾಹಿತ್ಯ ಸಮ್ಮೇಳನದಲ್ಲಿ ಚಂಪಾ ಮಾಡಿರುವ ಭಾಷಣವನ್ನು ಟೀಕಿಸುವ ಭರದಲ್ಲಿ ಒಂದು ರಾಜಕೀಯ ಪಕ್ಷದವರು ಸಾಹಿತಿಗಳ ತೇಜೋವಧೆ ಆರಂಭಿಸಿದ್ದಾರೆ. ಬಹಳಷ್ಟು ಸಾಹಿತಿಗಳು ಬಾಯಿಗೆ ಬೀಗಹಾಕಿ ಕುಳಿತಿದ್ದಾರೆ. ‘ಇದ್ದದ್ದು ಇದ್ದ ಹಾಗೆ’ ಮಾತನಾಡುವ, ಬರೆಯುವ ಮಂದಿಯ ಸದ್ಯದ ಸ್ಥಿತಿ ಇದು.
‘ಜಾತ್ಯತೀತ ಪಕ್ಷಗಳನ್ನು ಬೆಂಬಲಿಸಿ’ ಅಂದರೆ ನಾವು ಒಪ್ಪಿಕೊಂಡ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಕೊಡುವ ಮರ್ಯಾದೆಯೇ ಹೊರತು ವಿವಾದದ ಮಾತಲ್ಲ. ಕಟು ಮಾತಿಗೆ ಹೆಸರಾದ ಚಂಪಾ ಅವರು ಇಂಥ ಟೀಕೆಗಳನ್ನು ಎದುರಿಸುವ ಛಾತಿಯುಳ್ಳವರೂ ಹೌದು.
ಸಾಹಿತ್ಯ ಸಮ್ಮೇಳನಾಧ್ಯಕ್ಷರು ಪಾಂಡಿತ್ಯವನ್ನೇ ಮೆರೆಯಬೇಕೇ? ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎಷ್ಟೋ ಸಾಹಿತಿಗಳ ಅಧ್ಯಕ್ಷೀಯ ಭಾಷಣಗಳು ಪುಸ್ತಕರೂಪದಲ್ಲೇ ಬಿದ್ದು ಕೊಳೆಯುತ್ತಿವೆ. ಚಂಪಾ ಅವರೂ ಅದನ್ನೇ ಮಾಡಿದ್ದರೆ ಅವರು ‘ಚಂಪಾ’ ಆಗುತ್ತಿರಲಿಲ್ಲ.
ಸತ್ತ ಮಾತುಗಳಿಗಿಂತ ಎಚ್ಚರ ಇಡುವ ಮಾತುಗಳ ಅವಶ್ಯಕತೆಯಿರುವ ಈ ಹೊತ್ತಿನಲ್ಲಿ ಚಂಪಾ ಆಡಿದ ಮಾತುಗಳು ‘ಬರೊಬ್ಬರಿ’ ಇವೆ. ಇದರಲ್ಲಿ ರಾಜಕೀಯ ವಾಸನೆ ಇರಬಾರದಿತ್ತು ಅಂದರೆ, ಸಾಹಿತಿಯಾದವನು ಗಡ್ಡ ನೀವಿಕೊಂಡು ಪ್ರಕಾಂಡ ಪಾಂಡಿತ್ಯವನ್ನಷ್ಟೇ ಬಿತ್ತರಿಸಿ ‘ಶಹಬ್ಬಾಸ್ಗಿರಿ’ ಪಡೆದುಕೊಳ್ಳಬೇಕಿತ್ತೇ?