ಈ ಬಾರಿ ಚುನಾವಣೆಯಲ್ಲಿ ಅಕ್ರಮ ತಡೆಯಲು ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅದನ್ನು ಮೆಚ್ಚಲೇಬೇಕು. ಆದರೆ ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕುವ ಕ್ರಮಗಳು ಚುನಾವಣಾ ಸಂದರ್ಭಗಳಲ್ಲಿ ಮಾತ್ರ ಇದ್ದರೆ ಸಾಕೆ?
ದಾಖಲೆಗಳಿಲ್ಲದ ಹಣಕಾಸು ಹಾಗೂ ವಿವಿಧ ವಸ್ತುಗಳ ಸಾಗಣೆ ಹಾಗೂ ಸಂಗ್ರಹಣೆಯನ್ನು ತಡೆಯುವ ಹಾಗೂ ವಶಪಡಿಸಿಕೊಳ್ಳುವ ಕಾರ್ಯ ನಡೆದಿದೆ. ಚುನಾವಣೆ ನಂತರ ಆಯೋಗ ತನ್ನ ಜವಾಬ್ದಾರಿ ಮುಗಿಸಿ ಈ ಕೆಲಸವನ್ನು ನಿಲ್ಲಿಸಿಬಿಡುತ್ತದೆ. ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳೇ ಅಲ್ಲದೆ ಕಾಳಸಂತೆಕೋರರೂ, ವಿವಿಧ ಕ್ರಿಮಿನಲ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡವರಿಗೆ ಹಣಕಾಸು ಇತ್ಯಾದಿ ಒದಗಿಸಲು ಜನ ಭಯಪಡುತ್ತಾರೆ. ಅವರ ಇಂತಹ ಅನೈತಿಕ ವ್ಯವಹಾರಗಳಿಗೆ ತಾತ್ಕಾಲಿಕವಾಗಿ ಕಡಿವಾಣ ಬೀಳುತ್ತದೆ. ಆದರೆ ಚುನಾವಣೆಯ ನಂತರಮತ್ತೆ ಯಥಾಪ್ರಕಾರ ನಡೆಯುತ್ತದೆ!
ವಿವಿಧ ಸರಕುಗಳ ಅಕ್ರಮ ಸಾಗಣೆ ಹಾಗೂ ವ್ಯಾಪಾರ ತಡೆಯುವಲ್ಲಿ ತೆರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿದ್ದರೂ ನೆಪಮಾತ್ರಕ್ಕಷ್ಟೆ. ಈಗಾಗಲೇ ಇರುವ ಇಲಾಖೆಗಳನ್ನು ಸುಧಾರಿಸಿಯಾಗಲೀ, ಶಾಶ್ವತ ಆಯೋಗವೊಂದನ್ನು ರಚಿಸುವ ಮೂಲಕವಾಗಲೀ ಸುಧಾರಣೆಗಳನ್ನು ತರಬಹುದಲ್ಲದೆ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆಯನ್ನೂ ತಡೆಗಟ್ಟಬಹುದು.
ಚುನಾವಣೆ ಮುಗಿದು ನೀತಿ ಸಂಹಿತೆ ಕೊನೆಗೊಂಡ ನಂತರ ಗೆದ್ದವರು ಬೆಂಬಲಿಗರಿಗೆ ಹಾಗೂ ಮತದಾರರಿಗಾಗಿ ನಡೆಸುವ ಹೆಂಡ-ಬಾಡೂಟಗಳನ್ನೂ, ನಂತರದಲ್ಲಿ ಆತನಿಂದಾಗುವ ಸ್ವಜನಪಕ್ಷಪಾತವನ್ನೂ, ಅವನ ಅಕ್ರಮ ವ್ಯವಹಾರಗಳನ್ನು ತಡೆಗಟ್ಟುವ ಬಗೆ ಹೇಗೆಂದು ಚಿಂತಿಸಬೇಕಾಗಿದೆ.