ಮೈಸೂರು ರಸ್ತೆ ಸೇವಾ ಠಾಣೆ ವ್ಯಾಪ್ತಿಯಲ್ಲಿ ಗ್ರಾಹಕರು ನೀರಿನ ಸಂಪರ್ಕಕ್ಕಾಗಿ ಅರ್ಜಿಗಳನ್ನು ಗುತ್ತಿಗೆದಾರರ ಮೂಲಕ ಸಲ್ಲಿಸಿದಾಗ, ನಿಗದಿತ ವೇಳೆಯಲ್ಲಿ ತಪಾಸಣೆ ನಡೆಸಿ ಮೇಲಿನ ಅಧಿಕಾರಿಗಳಿಗೆ ಕಡತವನ್ನು ವಿಲೇವಾರಿ ಮಾಡಲು ಸ್ಥಳೀಯ ಅಧಿಕಾರಿಗಳು ಕಾರ್ಯನಿರ್ವಹಿಸುವಲ್ಲಿ ವಿಳಂಬ ನೀತಿ ಅನುಸರಿಸಿರುತ್ತಾರೆ. ಅಲ್ಲದೇ ಗುತ್ತಿಗೆದಾರರನ್ನು ಮಧ್ಯವರ್ತಿಗಳನ್ನಾಗಿ ಬಳಸಿಕೊಂಡು ಗ್ರಾಹಕರನ್ನು ಹಣಕ್ಕಾಗಿ ಪೀಡಿಸುತ್ತಾರೆ.
ಜಲಮಂಡಲಿಯ ಈ ವಿಳಂಬ ನೀತಿಯಿಂದಾಗಿ, ಸರ್ಕಾರದ `ನಿಗದಿತ ಅವಧಿಯಲ್ಲಿ ಸಂಪರ್ಕ ನೀಡುವ ಮತ್ತು ಇತರೆ ಸೇವೆಗಳಿಗೂ ಕಾಲಾವಧಿ ನಿಗದಿಪಡಿಸುವ' ಸಕಾಲ ಯೋಜನೆಯಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ. ಗ್ರಾಹಕರ ದೂರುಗಳಿಗೂ ಸಮಪರ್ಕವಾಗಿ ಹಾಗೂ ತುರ್ತಾಗಿ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಗ್ರಾಹಕಸ್ನೇಹಿ ಅಧಿಕಾರಿಗಳನ್ನು ನೇಮಿಸಿ ಸಕಾಲ ಯೋಜನೆಯಂತೆ ಎಲ್ಲಾ ಕಡತಗಳು ನಿಗದಿತ ಅವಧಿಯಲ್ಲಿ ವಿಲೇವಾರಿಯಾಗುವಂತೆ ಅವಶ್ಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಿ.
- ಶ್ರೀಕೃಷ್ಣ .