ಹಗರಣಗಳಿಂದ ಮುಕ್ತವಾದ ಯಾವ ರಾಜಕೀಯ ಪಕ್ಷವೂ ಈಗ ಇಲ್ಲ. ಎಲ್ಲರ ಬಣ್ಣವೂ ಬಯಲಾಗುತ್ತಿದೆ. ನಮ್ಮ ಪ್ರಜಾಸತ್ತಾತ್ಮಕ ವೇದಿಕೆಗಳ ಇತ್ತೀಚಿನ ವಿದ್ಯಮಾನಗಳ ‘ವಿನ್ಯಾಸ’ ನೋಡಿದರೆ, ಹೇಗಾದರೂ ಗಲಾಟೆ- ಗೊಂದಲಗಳ ದೂಳೆಬ್ಬಿಸಿ, ಅವರವರ ಹಗರಣಗಳು ಮುಚ್ಚಿಹೋಗುವಂತೆ, ಜನರ ಮನಸ್ಸಿನಿಂದ ಮರೆಯಾಗುವಂತೆ, ನಮ್ಮ ಎಲ್ಲ ರಾಜಕೀಯ ಪಕ್ಷಗಳು ಒಂದು ‘ಒಳ-ಒಪ್ಪಂದ’ ಮಾಡಿಕೊಂಡಿರಬಹುದೇ ಎಂಬ ಅನುಮಾನ ಉಂಟಾಗುತ್ತಿದೆ. ಕುಮಾರಸ್ವಾಮಿ ತಮ್ಮ ಸದ್ಯದ ನಿಲುವು ಕೈಬಿಡಲಿ ಎಂಬುದು ನನ್ನ ಆಗ್ರಹವಲ್ಲ. ರಾಜಕಾರಣಿಗಳಿಗೆ ಅವರದೇ ಅಜೆಂಡಾಗಳಿರುತ್ತವೆ. ಆದರೆ ‘ಪ್ರಜೆ’ಗಳು ಎನ್ನಿಸಿಕೊಂಡ ನಾವು ಈ ಕುರಿತು ಎಚ್ಚರ ವಹಿಸುವುದು ನಮ್ಮ ಪ್ರಜಾಧರ್ಮ.