ಲೈಂಗಿಕ ಅಲ್ಪಸಂಖ್ಯಾತರ ವಿಷಯದಲ್ಲಿ ಸರ್ಕಾರದ ಕಡೆಗಣನೆ ಮತ್ತು ಜನರು ಅವರನ್ನು ಪರಿಗಣಿಸುವ ರೀತಿ ನೋಡಿದರೆ ಬೇಸರವಾಗುತ್ತದೆ. ಅವರು ಬಸ್ಸು, ರೈಲು, ರಸ್ತೆ ಸಿಗ್ನಲ್ಗಳಲ್ಲಿ ಹಣ ಕೇಳುವ ಪರಿಸ್ಥಿತಿ ಸೃಷ್ಟಿಯಾಗಿರುವುದು ನಮ್ಮ ಸಮಾಜ ಮತ್ತು ಸರ್ಕಾರಗಳ ಬೇಜವಾಬ್ದಾರಿ ನಡೆಯಿಂದ. ಅವರಿಗೆ ಕಷ್ಟಪಟ್ಟು ಕೆಲಸ ಮಾಡಲು ಏನಾಗಿದೆ ಎಂದು ಕೆಲವರು ಕೇಳಬಹುದು. ಅವರು ಕೆಲಸ ಮಾಡಲು ಸಿದ್ಧರಿದ್ದರೂ ಅವರಿಗೆ ಕೆಲಸ ಕೊಡುವವರ ಸಂಖ್ಯೆ ಬೆರಳೆಣಿಕೆ ಮಾತ್ರ. ಈಗಲಾದರೂ ಸರ್ಕಾರ ಅವರ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಕೈಗೊಳ್ಳಬೇಕು. ಶಿಕ್ಷಣ, ಸರ್ಕಾರಿ ಉದ್ಯೋಗದಲ್ಲಿ ಅವರಿಗೆ ಮೀಸಲಾತಿ ಕಲ್ಪಿಸಬೇಕು.
ಇದರೊಂದಿಗೆ ಅವರನ್ನು ವಿಶೇಷ ಸಾಮರ್ಥ್ಯ ಇರುವವರು ಎಂದು ಪರಿಗಣಿಸಿ ಅವರಿಗೆ ಮಾಸಿಕ ಭತ್ಯೆ ನೀಡುವುದರಿಂದ ಲೈಂಗಿಕ ಅಲ್ಪಸಂಖ್ಯಾತರ ಜೀವನವೂ ಸುಧಾರಿಸುತ್ತದೆ. ಅವರು ಬೇರೆ ಯವರ ಎದುರು ಹಣಕ್ಕೆ ಕೈ ಚಾಚುವುದು ತಪ್ಪುತ್ತದೆ. ಅವರಿಗೆ ಪಡಿತರ ಚೀಟಿ, ಆಧಾರ್ ಸಂಖ್ಯೆ ಮತ್ತು ಗುರುತಿನ ಚೀಟಿಯನ್ನು ವಿತರಿಸುವ ಮುಖಾಂತರ ಅವರನ್ನು ಮುಖ್ಯವಾಹಿನಿಗೆ ತರಬೇಕು.
–ಹಾಲೇಶ್ ಎಂ.ಎಸ್., ಕುವೆಂಪು ವಿ.ವಿ., ಶಂಕರಘಟ್ಟ