ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವ ವಹಿಸಿದ್ದ ನರೇಂದ್ರ ಮೋದಿ ವೈಯಕ್ತಿಕವಾಗಿ ವಿವಾದಾತ್ಮಕ ವ್ಯಕ್ತಿಯೋ ಅಲ್ಲವೋ ಎಂಬುದನ್ನು ಪಕ್ಕಕ್ಕಿಟ್ಟು ನೋಡಿದರೆ, ಬಿಜೆಪಿಯು ಅಭೂತಪೂರ್ವ ಜಯಭೇರಿ ಬಾರಿಸಿರುವುದಕ್ಕೆ ಅನೇಕ ಕಾರಣಗಳಿವೆ.
ಕಾಂಗ್ರೆಸ್ ಹಾಗೂ ಬಹುತೇಕ ಇತರ ಪಕ್ಷಗಳ ಮುಖಂಡರು, ಅಲ್ಪಸಂಖ್ಯಾತ ಕೋಮಿನವರ ವೋಟು ಪಡೆಯುವ ರಾಜಕೀಯ ದುರುದ್ದೇಶದಿಂದ ಮೋದಿ ವಿರುದ್ಧ ಎಲ್ಲೆಡೆ ಕ್ಷುಲ್ಲಕವಾಗಿ ಮತ್ತು ನಿರಂತರವಾಗಿ ಟೀಕೆ ಮಾಡಿದ್ದು ಸೋಲಿಗೆ ಮುಖ್ಯ ಕಾರಣ. ದೇಶದ ಸಮಸ್ಯೆಗಳ ಬಗ್ಗೆ ಹೆಚ್ಚು ಮಾತನಾಡದೆ ಪ್ರತಿ ಸಂದರ್ಭದಲ್ಲಿ ಕೋಮುವಾದಿ, ಬಂಡವಾಳಶಾಹಿಗಳ ಕೈಗೊಂಬೆ, ನರಹಂತಕ, ರಾಕ್ಷಸ, ಸರ್ವಾಧಿಕಾರಿ ಎಂಬಂತಹ ಮಾತುಗಳನ್ನು ನಿರಂತರವಾಗಿ ಆಡಿದ್ದಾರೆ.
ಇದು ಸಾಲದೆಂಬಂತೆ ಬುದ್ಧಿಜೀವಿಗಳೆನಿಸಿಕೊಂಡಿರುವ ಕೆಲವರ ಮಾತುಗಳು ಮತದಾರರನ್ನು ರೊಚ್ಚಿಗೆಬ್ಬಿಸಿವೆ. ಇದರಿಂದ ಭಾರಿ ಸಂಖ್ಯೆಯಲ್ಲಿ ಮತದಾನ ಮಾಡಿ ತಮ್ಮ ರೋಷವನ್ನು ಹೊರಹಾಕಿರುವುದು ಬಿಜೆಪಿ ಗೆಲ್ಲಲು ಮುಖ್ಯ ಕಾರಣವಾಗಿದೆ. ಒಟ್ಟಾರೆ ಕಾಂಗ್ರೆಸ್ನ ಮೋದಿ ವಿರುದ್ಧದ ಸಂಪೂರ್ಣ ನಕಾರಾತ್ಮಕ ಪ್ರಚಾರದ ಫಲಿತಾಂಶ ಇಂದು ನಮ್ಮ ಮುಂದಿದೆ.
–ಡಾ. ಆರ್. ವಿಜಯಸಾರಥಿ
ಬೆಂಗಳೂರು