ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಮಳೆ ಬಂತು ಮಳೆ!

Published 20 ಮೇ 2024, 22:30 IST
Last Updated 20 ಮೇ 2024, 22:30 IST
ಅಕ್ಷರ ಗಾತ್ರ

‘ವಿಜ್ಞಾನಿಗಳು ಅದೆಂತದ್ದೋ ಲಾ ನಿನಾ ಅಂತ ಕೂಲಿಂಗ್-ಹೀಟಿಂಗ್ ಎಪೆಕ್ಟು ಸುರುವಾಯ್ತಾ ಅದೆ ಅಂದವ್ರೆ. ಅದುಕ್ಕೇ ಅಂತೆ ಈ ಪಾಟಿ ಮಳೆ ಹುಯ್ಯತಿರದು’ ವಿಷಯ ಲೀಕು ಮಾಡಿದೆ.

‘ಅಯ್ಯೋ ನನ್ನಪ್ಪನೆ, ಕುಮಾರಣ್ಣ, ಡಿ.ಕೆ, ಅಸೋಕ ಇವರ ಮಾತಿನ ಹೀಟಿಂಗು-ಕೂಲಿಂಗು ತಡೆಯಕಾಯ್ತಿಲ್ಲ ಕಪ್ಪ. ಇವರೆಲ್ಲರೂ ದೇವರಿಗೆ ಹರಕೆ ಹೊತ್ಕಂದು ಬಾಯಿಬೀಗ ಹಾಕಿಸ್ಕಂದು ಕೈಲಿ ಹೊಂಬಾಳೆ ಹಿಡಕಂದು ನೇಮದಲ್ಲಿದ್ರೆ ನಮಗೆ ನೆಮ್ಮದಿ!’ ಅಂದ ಚಂದ್ರು.

‘ಮ್ಯಾಗಲಮನೆ ಎಲೆಕ್ಷನ್ನಲ್ಲಿ ಟಿಕೇಟಿಗೆ ಹೊಡೆದಾಟ, ಬಂಡಾಯದ ಗುಡುಗು-ಸಿಡಿಲು ಎಲ್ಲಾ ಅದವಂತೆ’ ಅಂತು ಯಂಟಪ್ಪಣ್ಣ.

‘ಅವೆಲ್ಲಾ ರಾಜಕೀಯದ ನಾತಾವರಣ ಕೆಟ್ಟಾಗ ನಡೆಯೋ ಹೀಟಿಂಗ್-ಕೂಲಿಂಗ್ ಜಡಿಮಳೆ ಸೂಚನೆ ಕನಣೈ!’ ಅಂತಂದೆ.

‘ಅಲ್ಲ ಕನ್ರೋ, ಬ್ಯಾರೇ ಟೈಮಲ್ಲಿ ಇಲ್ಲುದ್ದು ಐಪಿಎಲ್ ಮ್ಯಾಚ್ ನಡೀವಾಗ ಮಾತ್ರ ಮಳೆ ಹೂದು ಕೆಡಗತದಲ್ಲಾ ಯಾಕೆ ಗೊತ್ತಾ? ನಮ್ಮ ಇ.ಡಿ-ಐ.ಟಿಗೆ ಇದ್ದಂಗೆ ಮಳೆಗೂ ಅದರದ್ದೇ ಆದ ಒಂದು ಸಂ-ವಿಧಾನ ಇರತದೆ’ ಅಂದ್ರು ತುರೇಮಣೆ ಮುಗುಂ ಆಗಿ.

‘ಅದೇನು ಸಂ-ವಿಧಾನ ಅಂತ ಬುಡಸೇಳಿ ಸಾ!’ ಅಂತ ತುರೇಮಣೆಗೆ ಗೋಗರೆದೆ.

‘ಒಂದು ಮ್ಯಾಚು ನೋಡಕ್ಕೆ ಐವತ್ತು ಸಾವಿರ ಜನ ಬಂದು ಕುಕಂದಿರತರಾ! ಮ್ಯಾಚು ಗೆದ್ದಾಗ ಕೂಲಾಗಿ ಅರ್ಧ ಜನ, ಸೋತಾಗ ಹೀಟಲ್ಲಿ ಇನ್ನರ್ಧ ಜನ ನಿಟ್ಟುಸಿರು ಬುಡ್ತರಲ್ಲ ಈ ಫ್ಯಾನುಗಳ ಬಿಸಿ-ಥಂಡಿ ಗಾಳಿ ಮ್ಯಾಕ್ಕೋಗಿ ಮೋಡವ ಹಿಚುಕಿ ಮಳೆ ಹುಯ್ಯಸತದೆ ಕಲಾ’ ಅಂದು ತಮ್ಮ ಸಂ-ಶೋಧನೆಯನ್ನು ಹೊರಗೆಡವಿದರು.

‘ಈಗ ಅದಕ್ಕೆ ತಮ್ಮ ನೀರಾ-ವರಿ ಬಲಸಂಪನ್ಮೂಲ ಏನನ್ನುತ್ತೆ?’ ಅಂತಂದೆ.

‘ನೋಡ್ಲಾ, ನನ್ನ ಪ್ರಕಾರ ಯಾವ್ಯಾವ ಜಿಲ್ಲೇಲಿ ಮಳೆ ಹೂದಿಲ್ಲ ಅಲ್ಲೆಲ್ಲಾ 20-20 ಕ್ರಿಕೆಟ್ ಮ್ಯಾಚ್ ಆಡಿಸಿದರೆ ಮಾಮೇರಿ ಮಳೆಯಾಯ್ತದೆ’ ಅಂತ ಅಪ್ಪಣೆ ಕೊಡಿಸಿದರು.

ಸದ್ಯ ಈ ಮಹಾಶಯನ ಐಡಿಯಾಗಳನ್ನು ಸಿಲ್ಲೀ ಪಾಯಿಂಟಲ್ಲಿ ಯಾರೂ ಕ್ಯಾಚು ಹಿಡಿಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT