ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ನಿರೀಕ್ಷೆಗಳ ಭಾರ ಇನ್ನೂ ಹೆಚ್ಚಾಗಿದೆ. ಇದಕ್ಕೆ ಕಾರಣ ಘೋಷಣೆಯಾಗಿರುವ ಯೋಜನೆಗಳು. ಈ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಮುಂದಿನ ವರ್ಷಗಳಲ್ಲಿ ದೇಶದ ಅಭಿವೃದ್ಧಿ ಪಥವೇ ಬದಲಾಗಬಹುದು.
ಆದರೆ ಕೆಲವು ಯೋಜನೆಗಳ ಸ್ವರೂಪ ಸ್ಪಷ್ಟವಾಗಿ ಹೊರಗೆಬಂದಿಲ್ಲ. ‘ಸ್ಮಾರ್ಟ್ ಸಿಟಿ’ ಪರಿಕಲ್ಪನೆ ಹೇಗಿರುತ್ತದೆ? ‘ಮೇಕ್ ಇನ್ ಇಂಡಿಯಾ’ ಘೋಷಣೆ ಜನಸಾಮಾನ್ಯರಿಗೆ ಹೇಗೆ ಪ್ರಯೋಜನಕಾರಿ ಎಂಬುದರ ಒಳಸೂಕ್ಷ್ಮಗಳು ಹೆಚ್ಚು ಜನರಿಗೆ ಗೊತ್ತಿಲ್ಲ.
ತಿಳಿಹೇಳುವ ಕೆಲಸ ಆಗಬೇಕು. ಚರ್ಚೆ ಇಲ್ಲದೆ ತರಾತುರಿಯಲ್ಲಿ ಸುಗ್ರೀವಾಜ್ಞೆಗಳನ್ನು ಹೊರಡಿಸಿರುವುದು, ಮಸೂದೆಗಳನ್ನು ಮಂಡಿಸಿರುವುದು ಮತ್ತು ಆಡಳಿತ ಪಕ್ಷದ ಕೆಲವು ಸಂಸದರ ಹೇಳಿಕೆಗಳು ಸರ್ಕಾರಕ್ಕೆ ಮುಜುಗರ ಉಂಟು ಮಾಡಿವೆ. ಬಿಜೆಪಿ ನಾಯಕರು ಮನಸೋ ಇಚ್ಛೆ ಹೇಳಿಕೆ ನೀಡುವುದನ್ನು ಬಿಡಬೇಕು. ಇಲ್ಲವಾದರೆ ಏನೇ ಅಭಿವೃದ್ಧಿ ಸಾಧಿಸಿದರೂ ಅದನ್ನೆಲ್ಲ ಇಂತಹ ಮಾತು ನುಂಗಿಬಿಡುತ್ತದೆ.