ಚೀನಾ ದೇಶದ ಒಬ್ಬ ಯುವತಿಯನ್ನು ಮ್ಯೆಸೂರಿನ ಯುವಕನೊಬ್ಬ ವಿವಾಹವಾದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಪ್ರೀತಿಗೆ ದೇಶ, ಭಾಷೆಗಳ ಎಲ್ಲೆ ಇಲ್ಲವೆಂಬುದು ಮತ್ತೊಮ್ಮೆ ಸಾಬೀತಾಗಿದೆ. ಜಾತಿ, ಧರ್ಮಗಳನ್ನು ಮುಂದಿಟ್ಟುಕೊಂಡು ಜಾತಿ– ಜಾತಿಗಳ ಮಧ್ಯೆ ನಡೆಯುವ ಸಂಘರ್ಷ ಇನ್ನಾದರೂ ಕೊನೆಗೊಳ್ಳಲಿ.
50ರ ದಶಕದಲ್ಲಿ ಭಾರತದ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರೂ ಹಾಗೂ ಚೀನಾದ ಪ್ರಧಾನಿಯಾಗಿದ್ದ ಚೌ ಎನ್ ಲಾಯ್ ‘ಭಾರತ- ಚೀನಾ ಭಾಯಿ ಭಾಯಿ’ ಎಂಬ ಘೋಷಣೆ ಮೂಲಕ ಭಾರತ ಹಾಗೂ ಚೀನಾ ದೇಶಗಳ ಪರಸ್ಪರ ಸ್ನೇಹ ವೃದ್ಧಿಗೆ ನಾಂದಿ ಹಾಡಿದ್ದರು.
ಉಭಯ ದೇಶಗಳ ನಡುವೆ ಪಂಚಶೀಲ ತತ್ವಗಳ ಆಧಾರದ ಮೇಲೆ ಹಲವಾರು ಒಪ್ಪಂದಗಳು ಏರ್ಪಟ್ಟವು. ಆದರೆ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಅಷ್ಟೊಂದು ಸರಿಯಾಗಿಲ್ಲ. ಆದರೂ ಅಪರೂಪಕ್ಕೆ ಒಮ್ಮೆ ನಡೆಯುವ ಇಂತಹ ಮದುವೆಗಳು ಹಳೆಯದನ್ನೆಲ್ಲವನ್ನೂ ನೆನಪಿನ ಬುಟ್ಟಿಯಲ್ಲಿ ಹೊತ್ತು ತರುತ್ತವೆ.
–ಕೆ.ವಿ.ವಾಸು, ಮ್ಯೆಸೂರು