‘ಸಾಂಸ್ಕೃತಿಕ ರೂಪಾಂತರ’ ಎಂಬ ಶೀರ್ಷಿಕೆಯಡಿ ಡಾ. ಶಿವಮೂರ್ತಿ ಮುರುಘಾ ಶರಣರು ಬರೆದಿರುವಂತೆ (ಸಂಗತ, ಜೂನ್ 8) ಬಸವ ತತ್ವ ಪ್ರತಿಯೊಬ್ಬರಿಗೂ ಮಾದರಿಯಾಗಬೇಕಾಗಿದೆ. ಹಿಂದೆ ಬಸವಣ್ಣ ಸಂಬೋಳಿ ಸಂಸ್ಕೃತಿಯನ್ನು ವಿರೋಧಿಸಿ ‘ನಾನೂ ಒಬ್ಬ ಅಸ್ಪೃಶ್ಯ’ ಎಂದು ಶೋಷಿತರ ಜೊತೆಗೆ ಬೀದಿಗಿಳಿದರು.
ಆದರೆ ಈಗಿನ ನಮ್ಮ ರಾಜಕಾರಣಿಗಳು ಅಥವಾ ಕೆಲ ಮಠಾಧೀಶರು ಮೇಲ್ನೋಟಕ್ಕೆ ಮಾತ್ರ ದಲಿತರ ಕೇರಿಗಳಿಗೆ ಹೋಗಿ ವಾಸ್ತವ್ಯ ಹೂಡುವುದು, ಸಹಪಂಕ್ತಿ ಭೋಜನ ಮಾಡುವುದು, ನಂತರ ಮನೆಗೆ ಹೋಗಿ ಮಡಿಮೈಲಿಗೆ ತೊಳೆದುಕೊಳ್ಳುವಂಥ ಸ್ಥಿತಿ ಇದೆ. ಆದರೆ ಬಸವಣ್ಣ ಹಾಗೆ ಮಾಡಲಿಲ್ಲ.
ಇತ್ತೀಚಿನ ಚುನಾವಣೆ ಸಂದರ್ಭದಲ್ಲಿ ಪರಾಕು ಸಂಸ್ಕೃತಿ ಹೇಗಿತ್ತು ಎಂದರೆ, ಬೀದಿಯ ಇಕ್ಕೆಲಗಳಲ್ಲಿ ದಲಿತರು ಒಂದು ತುಂಬಿದ ಕೊಡ ನೀರು ಹಿಡಿದುಕೊಂಡು ಆ ರಾಜಕಾರಣಿ ಕಾಲಿಗೆ ಸುರಿದು ನಮಸ್ಕರಿಸುತ್ತಿದ್ದರು. ಇದು ಕೂಡ ವೈದಿಕಶಾಹಿ ಅಧಿಕಾರಶಾಹಿಯ ಬಳುವಳಿ. ಆಗ ರಾಜ, ಈಗ ರಾಜಕಾರಣಿ. ಏನೂ ವ್ಯತ್ಯಾಸವಿಲ್ಲ. ಇಂಥ ಸ್ಥಿತಿಯಲ್ಲಿ ಬಸವ ಮಾರ್ಗ ನಮಗೆಲ್ಲ ಆದರ್ಶವಾಗಬೇಕಾಗಿದೆ.