ಬೇಸಾಯದಿಂದ ಜೀವನ ಸಾಗಿಸುವುದು ಸಾಧ್ಯವಿಲ್ಲ ಎನ್ನುವುದು ಖಚಿತವಾದ ನಂತರ ಪಾವಗಡ ತಾಲ್ಲೂಕಿನ ಅನೇಕ ರೈತರು ಬೆಂಗಳೂರು ಹಾಗೂ ಇತರ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಅನೇಕ ರೈತರಿಗೆ ಒಂದು ಜೊತೆ ಎತ್ತು ಹಾಗೂ ಒಂದೆರಡು ಹಸುಗಳನ್ನು ನಿಭಾಯಿಸುವುದು ಕೂಡ ಈಗ ದುಸ್ತರವಾಗಿದೆ. ಕೂಲಿಯಾಳುಗಳ ಕೊರತೆಯಿಂದಲೂ ಬೇಸಾಯಕ್ಕೆ ಅಡ್ಡಿಯಾಗಿದೆ. ಆಳುಗಳ ವೇತನವೂ ಹೆಚ್ಚಾಗಿದೆ. ಹೀಗಾಗಿ ಬಹುತೇಕ ರೈತರಿಗೆ ಅಳುಗಳನ್ನು ಇಟ್ಟುಕೊಂಡು ಬೇಸಾಯ ಮಾಡಲು ಸಾಧ್ಯವಾಗುತ್ತಿಲ್ಲ.
ಸಕಾಲದಲ್ಲಿ ನಾಟಿ, ಕೊಯ್ಲು, ಕಣ ಇತ್ಯಾದಿಗಳನ್ನು ಮಾಡಲಾಗದೆ ನಷ್ಟವಾಗುತ್ತಿದೆ.
10-12 ಗ್ರಾಮಗಳನ್ನು ಒಂದು ಗುಂಪಾಗಿ ಪರಿಗಣಿಸಿ ಅಲ್ಲಿನ ರೈತರಿಗೆ ನಾಟಿ, ಕೊಯ್ಲು ಮತ್ತು ಕಾಳು ಒಕ್ಕಲು ಯಂತ್ರಗಳನ್ನು ರೈತರಿಗೆ ಬಾಡಿಗೆ ಆಧಾರದ ಮೇಲೆ ಒದಗಿಸಲು ಸರ್ಕಾರಕ್ಕೆ ಸಾಧ್ಯವಿದೆ. ಆಂಧ್ರಪ್ರದೇಶದ ಸರ್ಕಾರ ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿದೆ. ಬಜೆಟ್ನಲ್ಲಿ ಬೇಸಾಯ ಯಂತ್ರಗಳ ಖರೀದಿಗೆಂದೇ ಹಣ ಮೀಸಲಿಟ್ಟಿದೆ. ಕರ್ನಾಟಕ ಸರ್ಕಾರವೂ ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿ ಬೇಸಾಯಕ್ಕೆ ಪೂರಕವಾದ ಯಂತ್ರಗಳನ್ನು ಬಾಡಿಗೆಗೆ ದೊರಕುವಂತೆ ಮಾಡುವ ಮೂಲಕ ರೈತರಿಗೆ ನೆರವಾಗಲಿ.