ಕೆಲವು ದಿನಗಳ ಹಿಂದೆ ನಡೆದ ಪರಮಾಣು ಭದ್ರತಾ ಶೃಂಗಸಭೆಯಲ್ಲಿ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಐಎಸ್ ಉಗ್ರರ ಗುಂಪುಗಳು ಅಣ್ವಸ್ತ್ರಗಳನ್ನು ಪಡೆದುಕೊಂಡು ಬಳಸಬಹುದಾದ ಮತ್ತು ಸಂಭವಿಸಬಹುದಾದ ಅನಾಹುತಗಳ ಸಾಧ್ಯತೆ ಬಗ್ಗೆ ಮಾತನಾಡಿದ್ದು ಹೆಚ್ಚು ಮಹತ್ವ ಪಡೆದುಕೊಂಡಿದೆ. ತಡವಾಗಿಯಾದರೂ ಇದೊಂದು ಸಕಾರಾತ್ಮಕ ಹೇಳಿಕೆ.
ಹಲವು ವರ್ಷಗಳಿಂದ ಭಯೋತ್ಪಾದನೆಯಿಂದಾಗಿ ತೊಂದರೆ ಅನುಭವಿಸುತ್ತಿರುವ ಭಾರತ ವಿವಿಧ ವೇದಿಕೆಗಳಲ್ಲಿ ಅಣ್ವಸ್ತ್ರ ಮುಕ್ತ ವಿಶ್ವಕ್ಕಾಗಿ ಕರೆ ನೀಡುತ್ತಲೇ ಬಂದಿದೆ. ದಕ್ಷಿಣ ಏಷ್ಯಾ ಎಂಬ ಪ್ರಾದೇಶಿಕ ಭಾವನೆಯಿಂದಲೇ ನೋಡುತ್ತಾ, ಭಯೋತ್ಪಾದನೆಯ ಗಂಭೀರತೆಯನ್ನು ಅರಿಯದೆ ಪಾಶ್ಚಿಮಾತ್ಯ ರಾಷ್ಟ್ರಗಳು ಇದನ್ನು ಉಪೇಕ್ಷಿಸುತ್ತಲೇ ಬಂದಿವೆ. ಯುರೋಪ್, ಉತ್ತರ ಅಮೆರಿಕಕ್ಕೆ ಭಯೋತ್ಪಾದನೆಯ ಕರಿನೆರಳು ಕಾಡಿದಾಗ ಮಾತ್ರ ಎಚ್ಚೆತ್ತುಕೊಳ್ಳುವ ಪ್ರವೃತ್ತಿಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಕೈಬಿಡಬೇಕು.
ಬದಲಾದ ಸನ್ನಿವೇಶದಲ್ಲಿ ಜಾಗತಿಕ ಸವಾಲಾಗಿರುವ ಭಯೋತ್ಪಾದನೆಯನ್ನು ಮೆಟ್ಟಿ ನಿಲ್ಲುವ ಬದ್ಧತೆಯನ್ನು ಎಲ್ಲ ರಾಷ್ಟ್ರಗಳೂ ತೋರಬೇಕು. ಅಲ್ಲದೆ ಭಯೋತ್ಪಾದನೆ ವಿರುದ್ಧದ ಹೋರಾಟವು ಪ್ರಾದೇಶಿಕ ದೃಷ್ಟಿಕೋನದಿಂದ ಹೊರಬಂದು ಜಾಗತಿಕ ದೃಷ್ಟಿಕೋನವನ್ನು ಹೊಂದಬೇಕಿದೆ. ಮಾನವೀಯತೆಯ ಮಾನದಂಡದಿಂದ ಭಯೋತ್ಪಾದನೆಯನ್ನು ಮಟ್ಟ ಹಾಕುವ ದಿಸೆಯಲ್ಲಿ ಒಗ್ಗಟ್ಟಿನ, ಒಮ್ಮತದ ಕ್ರಮಗಳನ್ನು ಗಂಭೀರವಾಗಿ ಕೈಗೊಳ್ಳಬೇಕಿದೆ.