ಅಬ್ದುಲ್ ಕಲಾಂ ನಿಧನರಾದ ಸುದ್ದಿ ಟಿ.ವಿ. ವಾಹಿನಿಗಳಲ್ಲಿ ಬರುತ್ತಿದ್ದಂತೆಯೇ ನನ್ನ ಸಣ್ಣ ಮಗ ‘ನಾಳೆ ಶಾಲೆಗೆ ರಜೆಯಲ್ಲವೇ’ ಎಂದ. ಹಿಂದೊಮ್ಮೆ ಜಯಲಲಿತಾ ಅವರ ವಿಚಾರದಲ್ಲಿ ನ್ಯಾಯಾಲಯ ಜಾಮೀನು ನೀಡದಿದ್ದರೂ, ‘ಜಾಮೀನು ಮಂಜೂರು’ ಎಂದು ನ್ಯಾಯಾಲಯದ ಆದೇಶಕ್ಕೆ ಮುನ್ನವೇ ಘೋಷಿಸಿದ್ದ ಒಂದು ವಾಹಿನಿಯಂತೂ, ಸರ್ಕಾರಕ್ಕಿಂತ ಮುಂಚಿತವಾಗಿಯೇ ಮಂಗಳವಾರ ಸರ್ಕಾರಿ ರಜೆ ಎಂದು ಘೋಷಿಸಿಬಿಟ್ಟಿತು! ಸಾಲದ್ದಕ್ಕೆ ತನ್ನ ಮಾಲೀಕತ್ವದ ಪತ್ರಿಕೆಯಲ್ಲಿಯೂ ಅದನ್ನು ಪ್ರಕಟಿಸಿತು.
ಏತಿ ಎಂದರೆ ಪ್ರೇತಿ ಎನ್ನುವಂತೆ, ಯು.ಆರ್.ಅನಂತಮೂರ್ತಿ ಅವರು ನಿಧನರಾದಾಗ ಸರ್ಕಾರ ರಜೆ ಘೋಷಿಸಿದ್ದರೂ ಖಾಸಗಿಯವರು ಶಾಲೆಗಳನ್ನು ನಡೆಸಿದ್ದರು. ಈಗ ಕ್ರಿಯಾಶೀಲತೆಯೇ ಜೀವಾಳವೆಂದು ಭಾವಿಸಿದ್ದ ಕಲಾಂ ಅವರ ಸಾವಿಗೆ ಕೆಲಸದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿ ರಾಜ್ಯ ಸರ್ಕಾರ ರಜೆ ಕೊಡದಿದ್ದರೂ, ಖಾಸಗಿ ಶಾಲೆಗಳು ರಜೆ ಘೋಷಿಸಿಕೊಂಡಿದ್ದವು!
ಹಾಗಿದ್ದರೆ ಖಾಸಗಿ ಶಾಲೆಗಳವರು ನಾಡಿನ ಜನರ ಭಾವನೆ, ನೆಲದ ಕಾನೂನುಗಳಿಗಿಂತ ಅತೀತರೇ? ಇಂತಹ ಗೊಂದಲ, ಸಮಸ್ಯೆಗಳನ್ನು ಅವರು ಪದೇಪದೇ ಸೃಷ್ಟಿಸುತ್ತಿದ್ದರೂ ಸರ್ಕಾರ ಸುಮ್ಮನಿರುವುದೇಕೆ?