ಮಾಗಡಿ ಮುಖ್ಯರಸ್ತೆಯ ಅಂಜನ್ ಚಿತ್ರಮಂದಿರ ಮತ್ತು ಶೇಷಾದ್ರಿಪುರಂ ಕಾಲೇಜು ಮುಂಭಾಗದಲ್ಲಿ ಕೆಲವು ತಿಂಗಳುಗಳ ಹಿಂದೆ ಕಾಮಗಾರಿಗಾಗಿ ಗುಂಡಿ ಅಗೆದು ಕಾಮಗಾರಿ ಪೂರ್ಣಗೊಳಿಸದೆ, ಹಾಗೆಯೇ ಬಿಡಲಾಗಿದೆ.
ಇದರಿಂದಾಗಿ ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳಿಗೆ ಅನನುಕೂಲವಾಗಿದೆ. ಅಷ್ಟೇ ಅಲ್ಲದೆ, ರಾಜಾಜಿನಗರ 6ನೇ ಬ್ಲಾಕ್ನ ರಾಜ್ಕುಮಾರ್ ರಸ್ತೆಯಲ್ಲಿ ಚರಂಡಿ ಕಾಮಗಾರಿಗಾಗಿ ರಸ್ತೆಯನ್ನು ಬಂದ್ ಮಾಡಿರುವುದರಿಂದ ಆ ಮಾರ್ಗವಾಗಿ ಸಂಚರಿಸುತ್ತಿದ್ದ ಬಿ.ಎಂ.ಟಿ.ಸಿ. ಬಸ್ ಸೇರಿದಂತೆ ವಾಹನಗಳು ಈ ರಸ್ತೆಯನ್ನು ಅವಲಂಬಿಸಬೇಕಾಗಿದೆ.
ಇದು ಸಹ ಮಾಗಡಿ ಮುಖ್ಯರಸ್ತೆ ವಾಹನ ದಟ್ಟಣೆ ಹೆಚ್ಚಲು ಕಾರಣವಾಗಿದೆ. ಅಷ್ಟೇ ಅಲ್ಲದೆ, ರಾತ್ರಿಯಲ್ಲಿ ಈ ಗುಂಡಿಗಳು ಇರುವುದೇ ಕಾಣುವುದಿಲ್ಲ. ಇದೇ ರೀತಿಯ ಗುಂಡಿಗಳಿಂದಾಗಿ ನಗರದಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನ ಸವಾರರೊಬ್ಬರು ಸಾವನ್ನಪ್ಪಿದ್ದು ಗಮನಾರ್ಹ. ಈಗಲಾದರೂ ಸಂಬಂಧಪಟ್ಟವರು ಅನಾಹುತ ಸಂಭವಿಸುವ ಮೊದಲೇ ಇತ್ತ ಗಮನ ಹರಿಸಲಿ.