`ಕೃಷ್ಣಾ ಮೇಲ್ದಂಡೆ ಯೋಜನೆಯ ಕುರಿತು ಎಫ್ಐಆರ್ ದಾಖಲಿಸಿರುವುದರ ಹಿಂದೆ ಯಾರದೋ ಕೈವಾಡವಿದೆ, ಅವರ ಸಂಪೂರ್ಣ ಜಾತಕ ನನ್ನ ಕೈಯಲ್ಲಿದೆ, ಮುಂದೆ ಅವರಿಗೆ ಗಂಡಾಂತರ ಕಾದಿದೆ~ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದು (ಪ್ರವಾ ಅ 27) ವರದಿಯಾಗಿದೆ.
ಆರೋಪಗಳ ಸಮಗ್ರ ತನಿಖೆಗೆ ಎಫ್.ಐ.ಆರ್. ದಾಖಲಾಗಿದೆ. ಆರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಅಲ್ಲಿ ಅಪರಾಧ ನಿರ್ಣಯವಾಗುತ್ತದೆ. ಅದಕ್ಕೇಕೆ ಕುಮಾರಸ್ವಾಮಿಯವರು ಹೀಗೆ `ನನ್ನ ಸುದ್ದಿಗೆ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ನೀನು ಸುಮ್ಮನಿದ್ದರೆ ನಾನೂ ಸುಮ್ಮನಿರುವೆ~ ಎಂಬ ಬ್ಲ್ಯಾಕ್ಮೇಲ್ ಹೇಳಿಕೆಯನ್ನು ಕೊಡುತ್ತಾರೋ ಅರ್ಥವಾಗದ ಸಂಗತಿ.
ರಾಜ್ಯಮಟ್ಟದ ರಾಜಕಾರಣದಲ್ಲಿ ಕುಮಾರಸ್ವಾಮಿಯವರಿಗೆ ಬಂಧನದಲ್ಲಿರುವವರು ಎದುರಾಳಿಗಳಾಗಿರಬಹುದು. ಆದರೆ ನಮ್ಮ ರಾಜ್ಯದ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರಿಗೆ ತಂದೆ ಮಕ್ಕಳಿಬ್ಬರೂ ವಿಧಾನಸಭೆ, ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿಯೇ ಎದುರಾಳಿಗಳಾಗಿ, ನೇರಾನೇರ ಸೋಲಿನ ರುಚಿ ತೋರಿಸಿದ್ದರೂ `ರಾಜಕೀಯವಾಗಿ ಟೀಕೆ ಟಿಪ್ಪಣಿಗಳು ಸಹಜ, ಅಂದಮಾತ್ರಕ್ಕೆ ಇಂದಿನ ಅವರ ಪರಿಸ್ಥಿತಿಗೆ ಸಂತಸಪಡುವ ಮನೋಭಾವ ನನ್ನದಲ್ಲ~ (ಪ್ರವಾ.ಅ.27)ಎಂದಿರುವುದು ನಿಜಕ್ಕೂ ಪ್ರಬುದ್ಧತೆ, ರಾಜಕಾರಣದ ಬದ್ಧತೆಯನ್ನು ತೋರಿಸುತ್ತದೆ. ಅರವತ್ತರ ನಂತರ ಅರಳು ಮರಳು ಆರಂಭ ಎನ್ನಲಾಗುತ್ತದೆ, 78 ರ ಇಳಿವಯಸ್ಸಿನಲ್ಲಿಯೂ ಇಂಥ ಸಾತ್ವಿಕ ಮನಃಸ್ಥಿತಿ ಹೊಂದಿರುವ ಹಿರಿಯ ರಾಜಕಾರಣಿಗೆ ಅಭಿನಂದನೆಗಳು.