‘ಬಿಜೆಪಿಯವರ ಮಟ್ಟಕ್ಕೆ ಇಳಿದು ಮಾತನಾಡಲಾರೆ, ಅದು ಅವರ ಸಂಸ್ಕೃತಿಯನ್ನು ತೋರುತ್ತದೆ. ಅವರಿಗೆ ಸಂಸ್ಕಾರ, ಮನುಷ್ಯತ್ವ ಯಾವುದೂ ಇಲ್ಲ...’ ಎಂದು ತಮ್ಮ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಪ್ರತಿಕ್ರಿಯಿಸಿದ್ದಾರೆ. ಯೋಗಿ ಆದಿತ್ಯನಾಥ ಅವರ ಟೀಕೆಗೆ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಎಂದಿದ್ದಾರೆ (ಪ್ರ.ವಾ., ಮಾ. 8). ಆದರೆ ಇದಕ್ಕೂ ಮೂರು ದಿನಗಳ ಹಿಂದೆ ಇದೇ ಮುಖ್ಯಮಂತ್ರಿಯವರು ಕಾರ್ಯಕ್ರಮವೊಂದರಲ್ಲಿ ‘ನರೇಂದ್ರ ಮೋದಿ ಒಬ್ಬ ಸುಳ್ಳುಗಾರ, ಪ್ರಧಾನಿಯಾಗಲು ಲಾಯಕ್ಕಿಲ್ಲ, ಇವರಿಗೆ ನಾಚಿಕೆಯಾಗಬೇಕು’ ಎಂದೆಲ್ಲಾ ನಿಂದಿಸಿದ್ದಾರೆ. ಇದು ಇಡೀ ಭಾರತೀಯರಿಗೆ ಮಾಡಿದ ಅವಮಾನವಲ್ಲವೇ? ಯಾರು ಸುಸಂಸ್ಕೃತರು ಎಂಬುದು ಅವರ ನಾಲಿಗೆಯಿಂದಲೇ ತಿಳಿಯುತ್ತದೆ. ಆಚಾರವಿಲ್ಲದ ನಾಲಿಗೆಯ ಭಾಷೆ ಯುವ ಪೀಳಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದರಿಂದ ರಾಜಕಾರಣಿಗಳ ಗೌರವಕ್ಕೇ ಕುಂದು ಉಂಟಾಗುತ್ತದೆ.