ಸರ್ಕಾರಗಳು ಜನಪ್ರಿಯತೆ ಗಳಿಸುವ ಉದ್ದೇಶದಿಂದ ಘೋಷಿಸುವ ರೈತರ ಸಾಲ ಮನ್ನಾ ನಿರ್ಧಾರವು ನೈತಿಕ ಅಶಿಸ್ತು ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಅಭಿಪ್ರಾಯಪಟ್ಟಿದ್ದಾರೆ (ಪ್ರ.ವಾ., ಏ. 7).
ನೆರೆ, ಬರ ಹಾಗೂ ಇನ್ನಿತರ ಕಾರಣಗಳಿಂದಾಗಿ ಆಗುವ ಬೆಳೆ ನಷ್ಟ, ಇಳುವರಿ ಕೊರತೆ ಹಾಗೂ ಅಧಿಕ ಇಳುವರಿಯಿಂದಾಗುವ ಬೆಲೆ ಕುಸಿತದಂಥ ಅಂಶಗಳು ರೈತರ ಸಾಲ ಮನ್ನಾ ಮಾಡಲು ಕಾರಣವಾಗುತ್ತವೆ. ಸಾಲ ಮನ್ನಾ ಮಾಡುವುದರಿಂದ ಆಳುವ ಪಕ್ಷ ಜನಪ್ರಿಯವಾದರೆ ಅದು ರೈತರ ತಪ್ಪಲ್ಲ.
ಬ್ಯಾಂಕುಗಳು ಸಾರ್ವಜನಿಕರಿಗೆ ಸಾಲ ಕೊಡುವಾಗ ಸಾಲದ ಮೊತ್ತದ 2–3 ಪಟ್ಟು ಅಧಿಕ ಮೌಲ್ಯದ ಭದ್ರತೆಯನ್ನು ಪಡೆದಿರುತ್ತವೆ. ಸಾಲಗಾರರೇನಾದರೂ ಸುಸ್ತಿದಾರರಾದರೆ ಆ ಭದ್ರತೆಯ ಮೂಲಕ ಸಾಲವನ್ನು ವಸೂಲು ಮಾಡಲಾಗುತ್ತದೆ. ಬ್ಯಾಂಕುಗಳ ಬಲೆಯ ಕಣ್ಣುಗಳು ತುಂಬಾ ಸಣ್ಣ–ಸಣ್ಣದಾಗಿರುತ್ತವೆ.
ಚಿಕ್ಕ ಮೀನುಗಳೂ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಆದರೆ ತಿಮಿಂಗಿಲಗಳು ಆ ಬಲೆಯನ್ನು ಹರಿದು ಕೈಗೆ ಸಿಗದಂತೆ ಪರಾರಿಯಾಗುತ್ತವೆ. ಕಡೆಗೆ ಬ್ಯಾಂಕುಗಳು ಅಂತಹ ಭಾರೀ ಮೊತ್ತದ ಸಾಲವನ್ನು ‘ವಸೂಲು ಮಾಡಲು ಆಗದ ಸಾಲ’ (ಸಾಲ ಮನ್ನಾ ಅಲ್ಲ!) ಎಂದು ಘೋಷಿಸಿ ಕೈ ತೊಳೆದುಕೊಳ್ಳುತ್ತವೆ. ಇದನ್ನು ಹೇಗೆ ವಿಶ್ಲೇಷಿಸಬೇಕು? -ಕೆ.ಎಲ್. ಪ್ರಕಾಶ, ಕಡೂರು