ಅಸ್ಪೃಶ್ಯತೆಗೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ತೀರ್ಮಾನಕ್ಕೂ ಸಂಬಂಧ ಕಲ್ಪಿಸಿ ಆಡುವ ಮಾತುಗಳನ್ನು ನಂಬುವ ಸ್ಥಿತಿ ಈಗ ಇದೆಯೇ? ನೂರಾರು ವರ್ಷಗಳಿಂದ ಜಾತಿ ಭೇದಭಾವಕ್ಕೆ ಸಂಕೇತವಾಗಿರುವ ದೇವಸ್ಥಾನಗಳು ಜಾತೀಯತೆಯನ್ನು ತೊಡೆದುಹಾಕುವ ಕೆಲಸವನ್ನು ಮಾಡಬಲ್ಲವು ಎಂಬ ವಿಶ್ವಾಸ ದಮನಿತರಲ್ಲಿ ಬರುವುದಾದರೂ ಹೇಗೆ? ಉಡುಪಿಗೆ ಬಂದ ಕನಕನಿಗೆ ಆದ ಸ್ಥಿತಿಯೇ ಮುಂದೊಂದು ದಿನ ದಲಿತ, ಅಸ್ಪೃಶ್ಯ ರಾಮಭಕ್ತರಿಗೆ ಆಗಲಾರದು ಎಂದು ನಂಬುವುದು ಹೇಗೆ? ರಾಮ ಮಂದಿರ ನಿರ್ಮಾಣಕ್ಕಾಗಿ ಅದೆಷ್ಟೋ ದಲಿತ, ದಮನಿತರ ಕೈಗಳ ಮೂಲಕ ಇಟ್ಟಿಗೆಗಳು ಅಯೋಧ್ಯೆಯನ್ನು ತಲುಪಿವೆ. ಇಂತಹ ಕೈಗಳಿಗೆ ರಾಮನಿಗೆ ನಮಸ್ಕರಿಸುವ ಅವಕಾಶ ಲಭಿಸುವುದೇ? ರಾಮನನ್ನು ಆರಾಧಿಸುವ ಅವಕಾಶ ಕೆಲವೇ ಕೆಲವರಿಗೆ ಸಿಕ್ಕುವುದೆಂದಾದರೆ ರಾಮ ಮಂದಿರ ನಿರ್ಮಾಣ ಆಗಬೇಕೆನ್ನುವುದು ಇಡೀ ಹಿಂದೂ ಸಮಾಜದ ಅಪೇಕ್ಷೆ ಹೇಗಾಗುತ್ತದೆ?