ದಿನಾಂಕ ಡಿ.24 ರಂದು `ಪ್ರಜಾವಾಣಿ'ಯಲ್ಲಿ ಪ್ರಕಟವಾದ `ವಿಜ್ಞಾನದಿಂದಲೇ ಅಭಿವೃದ್ಧಿ ಸಾಧ್ಯ' ಎಂಬ ಸುದ್ದಿಯಲ್ಲಿ ರಾಜ್ಯಪಾಲರು ವ್ಯಕ್ತಪಡಿಸಿದ ಅಭಿಪ್ರಾಯವು ಅಸಮಂಜಸವಾಗಿದೆ.ಈ ಹೇಳಿಕೆ ಕಲಾವಿಭಾಗದ ಪದವಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಷ್ಟೋ ವಿದ್ಯಾರ್ಥಿಗಳಿಗೆ ಅಪಾರ ನೋವನ್ನುಂಟು ಮಾಡಿದೆ. ಕಲಾ ವಿಭಾಗದ ಪದವಿಗಳಾದ ಬಿ.ಎ., ಮತ್ತು ಎಂ.ಎ. ಓದಿದರೆ ಇಂದಿನ ವೇಗದ ಯುಗದಲ್ಲಿ (ತಂತ್ರಜ್ಞಾನ) ಹೆಜ್ಜೆ ಹಾಕಲು ಸಾಧ್ಯವಿಲ್ಲ ಎಂಬುದು ಅರ್ಥಹೀನ ಹೇಳಿಕೆ.
ರಾಜ್ಯಪಾಲರ ಹೇಳಿಕೆಯು ಇಂದಿನ ಆಧುನಿಕ ಜಗತ್ತಿಗೆ ಹಾಗೂ ಪಾಶ್ಚಾತ್ಯೀಕರಣ ಆಗುತ್ತಿರುವ ನಮ್ಮ ದೇಶಕ್ಕೆ ಅದೆಷ್ಟರ ಮಟ್ಟಿಗೆ ಸಮಂಜಸವಾಗಿದೆಯೋ ನಾ ಕಾಣೆ, ಆದರೆ ಒಂದು ದೇಶದಲ್ಲಿ ಮಾನವೀಯ ಮೌಲ್ಯಗಳ ಸ್ಥಾಪನೆ, ನೈತಿಕತೆಯ ಹುಟ್ಟು ಕಲೆಯಿಂದಲೇ ಹೊರತು ತಂತ್ರಜ್ಞಾನದಿಂದಲ್ಲ ಎಂಬುದು ನೆನಪಿನಲ್ಲಿರಲಿ. ಕೇವಲ ಆರ್ಥಿಕಾಭಿವೃದ್ಧಿಯ ದೃಷ್ಟಿಯಿಂದ ಅಭಿಪ್ರಾಯಪಡದಿರಲಿ. ದೇಶದಲ್ಲಿ ಸತ್ಯದ ಸ್ಥಾಪನೆ, ಧರ್ಮದ ಏಳಿಗೆ ಮತ್ತು ಸಾಮಾಜಿಕ ಕಳಕಳಿ. ವಿಜ್ಞಾನ ತಂತ್ರಜ್ಞಾನದಿಂದಲೇ ಮಾತ್ರ ಸಾಧ್ಯವಿಲ್ಲ. ಸಮಾಜದ ಸ್ವಾಸ್ಥ್ಯ ಬೆಳವಣಿಗೆ ಕಲಾಪ್ರೇಮಿಗಳಿಂದ ಮಾತ್ರ ಸಾಧ್ಯ
ವಿಜ್ಞಾನ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಾಧಿಸಿದ ಅದೆಷ್ಟೋ ಕಾರ್ಯಗಳನ್ನು ಕಲಾವಿಭಾಗದ ವಿದ್ಯಾರ್ಥಿಗಳು ಸಾಧಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯು ದೇಶ ದೇಶಗಳ ನಡುವೆ ಪರಸ್ಪರ ದ್ವೇಷ ಭಾವನೆ ಮತ್ತು ಪೈಪೋಟಿಗಳನ್ನುಂಟು ಮಾಡುತ್ತದೆ. ಇದು ಭವಿಷ್ಯಕ್ಕೆ ಮಾರಕ ಮತ್ತು ಮತ್ತೊಂದು ಮಹಾಯುದ್ಧಕ್ಕೆ ಪೂರಕ ಎಂದು ನನ್ನ ಅಭಿಪ್ರಾಯ.