ಎಲ್ಲ ನುಡಿಗಳಿಗೆ ಸಮಾನ ಹಕ್ಕು ಮತ್ತು ಗೌರವ ನೀಡುವುದು ಒಂದು ಬಲಿಷ್ಠ ಒಕ್ಕೂಟದ ಸಂಕೇತ. ಭಾರತ ಒಕ್ಕೂಟದಲ್ಲಿ ಎಲ್ಲ ನುಡಿಗಳಿಗೆ ಸಮನಾದ ಒತ್ತು ನೀಡುವ ಬದಲು ಕೇಂದ್ರ ಸರ್ಕಾರ ಹಿಂದಿ ಭಾಷೆಗೆ ಇನ್ನಿಲ್ಲದ ಆದ್ಯತೆ ನೀಡುತ್ತಿದೆ. ದೇಶದ ಸಂವಿಧಾನದಲ್ಲಿ ಎಲ್ಲರೂ ಸಮಾನ ಎಂದಿರುವಾಗ, ಭಾಷೆಗಳೇಕೆ ಸಮಾನವಾಗಿರಬಾರದು?
2011ರ ಜನಗಣತಿ ವರದಿಯ ಪ್ರಕಾರ ಭಾರತದಲ್ಲಿ ಹಿಂದಿ ಮಾತೃಭಾಷೆಯಾಗಿರುವುದು ಶೇಕಡ 26ರಷ್ಟು ಜನರಿಗೆ ಮಾತ್ರ. ಹೀಗಿರುವಾಗ ಹಿಂದಿಯೇತರ ಪ್ರಜೆಗಳ ತೆರಿಗೆಯ ಹಣವನ್ನು ಹಿಂದಿ ಭಾಷೆ ಪ್ರಚಾರಕ್ಕಾಗಿ ಬಳಸುವುದು ಎಷ್ಟು ಸರಿ? ಕರ್ನಾಟಕದಲ್ಲಿನ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಹಿಂದಿ ಭಾಷೆಯನ್ನು ಮಾತ್ರ ಪ್ರಚಾರ ಮಾಡಿ, ಕನ್ನಡ ನುಡಿಯನ್ನು ಕಡೆಗಣಿಸುವುದು ಸೂಕ್ತವಲ್ಲ. ಕೇಂದ್ರ ಸರ್ಕಾರ ಈ ತಾರತಮ್ಯಕ್ಕೆ ಕೂಡಲೇ ಕಡಿವಾಣ ಹಾಕಿ, ಎಲ್ಲ ಭಾಷೆಗಳನ್ನು ಸಮಾನವಾಗಿ ಪರಿಗಣಿಸಿ ನಮ್ಮ ಸಂವಿಧಾನದ ಸಮಾನತೆಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು.