ಮಳೆಗಾಲದಲ್ಲಿ ಕೆಲವೆಡೆ ಗ್ರಾಮೀಣ ಪ್ರದೇಶಗಳಲ್ಲಿ ಸಿಡಿಲು ಬಡಿದು ಜನ ಜಾನುವಾರುಗಳು ಸಾವನ್ನಪ್ಪುವುದು ಸಹಜ ಎಂಬಂತಾಗಿದೆ. ಕುಟುಂಬದ ಆಧಾರಸ್ತಂಭವಾಗಿದ್ದ ವ್ಯಕ್ತಿಗಳು ಹೀಗೆ ಇದ್ದಕ್ಕಿದ್ದಂತೆ ಸಿಡಿಲಿಗೆ ಬಲಿಯಾದರೆ ಆ ಕುಟುಂಬಗಳು ದಿಕ್ಕುಗೆಡುತ್ತವೆ.
ಎತ್ತುಗಳು ಸತ್ತಾಗಲಂತೂ ರೈತನ ಜಂಘಾಬಲವೇ ಉಡುಗಿಹೋಗುತ್ತದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳು ಮೃತರ ಮನೆಗೆ ಭೇಟಿ ನೀಡಿ, ಸರ್ಕಾರದ ಪರಿಹಾರದ ಚೆಕ್ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸರ್ಕಾರ ಒದಗಿಸಬೇಕು.
ನಗರಗಳಲ್ಲಿ ಎತ್ತರದ ಕಟ್ಟಡಗಳಿಗೆ ಸಿಡಿಲು ನಿರೋಧಕ ಉಪಕರಣವನ್ನು ಅಳವಡಿಸಿರುವುದರಿಂದ ಅಲ್ಲಿ ಸಿಡಿಲಿನಿಂದಾಗಿ ಸಾವುಗಳು ಉಂಟಾಗುವುದಿಲ್ಲ. ಅದೇ ರೀತಿ ಸರ್ಕಾರ ಹಳ್ಳಿಗೊಂದು ಸಿಡಿಲು ನಿರೋಧಕ ಉಪಕರಣವನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು.
ಎತ್ತರದ ಒಂದು ಕಂಬ ನಿಲ್ಲಿಸಿ ತುದಿಗೆ ಸಿಡಿಲು ನಿರೋಧಕವನ್ನು ಅಳವಡಿಸುವುದಕ್ಕೆ, ಸಿಡಿಲಿನಿಂದ ಸಂಭವಿಸಿದ ಒಬ್ಬ ವ್ಯಕ್ತಿಯ ಸಾವಿಗೆ ನೀಡುವ ಪರಿಹಾರಧನ ಸಾಕಾಗಬಹುದು.